janadhvani

Kannada Online News Paper

ಬುದ್ಧಿವಂತರ ಜಿಲ್ಲೆಗೆ ಕಳಂಕ: 8 ವರ್ಷದ ಮಗುವನ್ನು ಅತ್ಯಾಚಾರ ಗೈದು ಹತ್ಯೆ.!

ಮಂಗಳೂರು: ಹಂಚು ಮತ್ತು ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತಿದ್ದ ಜಾರ್ಖಂಡ್ ಮೂಲದ ದಂಪತಿಗಳ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹತ್ಯೆಗೈದು ಮೃತದೇಹವನ್ನು ಚರಂಡಿಗೆ ಎಸೆದಿರುವ ಅಮಾನುಷ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಗುರುಪುರ ಉಳಾಯಿಬೆಟ್ಟು ಪರಾರಿ ಎಂಬಲ್ಲಿ ರವಿವಾರ ಸಂಜೆ ಬೆಳಕಿಗೆ ಬಂದಿದೆ.

ಪರಾರಿ ಎಂಬಲ್ಲಿ ರಾಜ್ ಟೈಲ್ಸ್ ಎಂಬ ಹೆಸರಿನ ಹೆಂಚಿನ ಕಾರ್ಖಾನೆ ಕಾರ್ಯಾಚರಿಸುತ್ತಿದ್ದು , ಇಲ್ಲಿ ರಾಜ್ಯ, ಹೊರರಾಜ್ಯದ ಪುರುಷ ಮತ್ತು ಮಹಿಳಾ ಕಾರ್ಮಿಕರೂ ದುಡಿಯುತ್ತಿದ್ದಾರೆ. ಈ ಪೈಕಿ ಜಾರ್ಖಂಡ್ ಮೂಲದ ಮಹಿಳೆಯೋರ್ವರ 8 ವರ್ಷದ ಹೆಣ್ಣು ಮಗು ರವಿವಾರ ಸಂಜೆಯಿಂದ ನಾಪತ್ತೆಯಾಗಿತ್ತು.

ಮಧ್ಯಾಹ್ನದ ವೇಳೆಗೆ ಮಗು ನಾಪತ್ತೆಯಾಗಿದ್ದು, ಕೆಲಸದಲ್ಲಿದ್ದ ತಂದೆ ತಾಯಿಗೆ ಸಂಜೆ ನಾಲ್ಕು ಗಂಟೆಯ ವೇಳೆ ಗಮನಕ್ಕೆ ಬಂದಿದೆ. ಬಾಲಕಿಯ ನಾಪತ್ತೆಯಿಂದ ಆತಂಕಕ್ಕೊಳಗಾದ ಪೋಷಕರು ಹಾಗೂ ಇತರ ಕಾರ್ಮಿಕರು ಕಾರ್ಖಾನೆ ಸೇರಿದಂತೆ ಹಲವೆಡೆಗಳಲ್ಲಿ ಶೋಧ ನಡೆಸಿದ್ದು, ಈ ವೇಳೆ ಕಾರ್ಖನೆಯ ಪಕ್ಕದ ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೋಲೀಸರು, ಶೀಘ್ರದಲ್ಲೇ ಪೂರ್ಣ ಮಾಹಿತಿಯನ್ನು ನೀಡುವುದಾಗಿ ಹೇಳಿದ್ದಾರೆ.