janadhvani

Kannada Online News Paper

ಥರ್ಡ್ ಅಂಪೈರ್‌ ರಿಸಲ್ಟ್ ‘ಔಟ್’- ಪ್ರವಾಸೋಧ್ಯಮ ಸಚಿವರಿಗೆ ಕೋವಿಡ್ ದೃಢ

ಚಿಕ್ಕಮಗಳೂರು:ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಥರ್ಡ್ ಅಂಪೈರ್‌ ರಿಸಲ್ಟ್‌ಗಾಗಿ ಕಾಯುತ್ತಿದ್ದ ಸಚಿವರಿಗೆ ಶಾಕ್ ಎದುರಾಗಿದೆ.
ಹೌದು, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಒಂದು ವಾರದಲ್ಲಿ ಎರಡು ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ಪೈಕಿ ಒಮ್ಮೆ ನೆಗೆಟಿವ್ ಬಂದರೆ ಮತ್ತೊಮ್ಮೆ ಪಾಸಿಟಿವ್ ಬಂದಿತ್ತು. ಹೀಗಾಗಿ ಮೂರನೇ ಬಾರಿಗೆ ಟೆಸ್ಟ್‌ಗೆ ಒಳಗಾಗಿ ಥರ್ಡ್‌ ಅಂಪೈರ್‌ ರಿಸಲ್ಟ್‌ಗಾಗಿ ಕಾಯುತ್ತಿದ್ದೇನೆ ಎಂದು ಭಾನುವಾರವಷ್ಟೇ(ಜು.12) ಅವರು ಟ್ವೀಟ್ ಮಾಡಿದ್ದರು. ಇದೀಗ ಥರ್ಡ್ ಅಂಪೈರ್‌ ರಿಸಲ್ಟ್ ‘ಔಟ್’ ಆಗಿದೆ. ಇದರೊಂದಿಗೆ ಸಿ.ಟಿ. ರವಿ ಕೊರೋನಾ ಸೋಂಕಿಗೆ ತುತ್ತಾದ ರಾಜ್ಯದ ಮೊದಲ ಸಚಿವ ಎನಿಸಿದ್ದಾರೆ.
ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸುಲಿದ್ದು ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ ಎಂದು ಸಿ.ಟಿ. ರವಿ ಟ್ವೀಟ್ ಮೂಲಕ ತಮಗೆ ಸೋಂಕು ತಗುಲಿರುವುದನ್ನು ಖಚಿತ ಪಡಿಸಿದ್ದಾರೆ.

ಕೊರೋನಾ ವೈರಸ್ ಜನಸಾಮಾನ್ಯರು, ಕೊರೋನಾ ವಾರಿಯರ್ಸ್ ಮಾತ್ರವಲ್ಲದೆ ಇದೀಗ ರಾಜಕಾರಣಿಗಳನ್ನು ಕಾಡಲಾರಂಭಿಸಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಶರತ್ ಬಚ್ಚೇಗೌಡ, ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ, ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಸೇರಿದಂತೆ ರಾಜ್ಯದಲ್ಲಿ ಹಲವರಿಗೆ ಕೊರೋನಾ ಸೋಂಕು ವಕ್ಕರಿಸಿದೆ.