janadhvani

Kannada Online News Paper

ಹೊನ್ನಾವರ: ಆಸಿಡ್ ಮಿಶ್ರಿತ ಕ್ವಾರಂಟೈನ್ ಸೀಲು..?- ಧರ್ಮ ವಿವೇಚನೆ ಆರೋಪ

ಹೊನ್ನಾವರ: ಕೋವಿಡ್-19 ಮಹಾಮಾರಿಯ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಸಿಲುಕಿದವರನ್ನು ತವರಿಗೆ ತೆರಳಲು ನಿನ್ನೆ ರಾಜ್ಯ ಸರ್ಕಾರ ಅನುಮತಿಸಿದೆ.

ಇದರನ್ವಯ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ, ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಪ್ರವೇಶಿಸುವವರಿಗೆ ಕ್ವಾರಂಟೈನ್ ನಲ್ಲಿ ಉಳಿಯುವಂತೆ ಆದೇಶಿಸಲಾಗಿದ್ದು, ಗಡಿ ಪ್ರದೇಶದಲ್ಲಿ ಕೈಗಳಿಗೆ ಸೀಲು ಹಾಕಿ ಕಳಿಸಲಾಗುತ್ತಿದೆ. ಇದೀಗ ಈ ಸೀಲಿನಲ್ಲಿ ಧರ್ಮಾಧಾರಿತವಾಗಿ ವಿವೇಚನೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಉತ್ತರಕನ್ನಡದ ಕಾರವಾರ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸುಪಾ ಎಂಬಲ್ಲಿ ಸಾಗರದಿಂದ ಹೊನ್ನಾವರಕ್ಕೆ ತೆರಳಿದ ಕುಟುಂಬಕ್ಕೆ ಕೈಗೆ ಹಾಕಿದ ಸೀಲು ಆಸಿಡ್ ಮಿಶ್ರಿತವೆಂಬ ಸಂದೇಹವಿದ್ದು, ಮಕ್ಕಳ ಮತ್ತು ಮಹಿಳೆಯರ ಕೈಗಳಿಗೆ ಸೀಲು ಹಾಕಿದ ಭಾಗ ಸುಟ್ಟುಕರಕಲಾಗಿದೆ.

ಸೀಲುಹಾಕುವ ಅಧಿಕಾರಿಗಳು ಧರ್ಮ ವಿವೇಚನೆ ನಡೆಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದು, ಆರೋಗ್ಯ ಕಾರ್ಯಕರ್ತರ ಈ ಅಮಾನವೀಯ ಕೃತ್ಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸರ್ಕಾರದ ಗಮನಕ್ಕೆ ಬಾರದೇ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ಯಾವುದೋ ಕಿಡಿಗೇಡಿಗಳು ನೀಡಿದ ನಿರ್ದೇಶನ ಮೇರೆಗೆ ಕಾರಂಟೈನ್ ಸೀಲಿನಲ್ಲಿ ಧಾರ್ಮಿಕ ವಿವೇಚನೆ ನಡೆಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.