janadhvani

Kannada Online News Paper

ಪೋಲೀಸ್ ದೌರ್ಜನ್ಯಕ್ಕೆ ವಿದ್ಯಾರ್ಥಿ ಬಲಿ : ಪ್ರಜಾಪ್ರಭುತ್ವ ರಕ್ಷಣೆಗಾಗಿ ಹೋರಾಡಲು ಎಸ್ಸೆಸ್ಸೆಫ್ ಕರೆ

ಕಲ್ಲಿಕೋಟೆ,ಡಿ.15:ದೆಹಲಿಯ ಜಾಮಿಯಾ ಮಿಲ್ಲಿಯ್ಯಾದ ವಿದ್ಯಾರ್ಥಿಗಳ ಮೇಲಿನ ಪೋಲೀಸರ ಕ್ರೂರ ಹಿಂಸೆಗೆ ಓರ್ವ ವಿದ್ಯಾರ್ಥಿ ಬಲಿಯಾಗಿದ್ದು, ಹಲವಾರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಕ್ರೂರ ದೌರ್ಜನ್ಯವೆಸಗಿದ ಪೋಲೀಸ್ ಕ್ರಮವನ್ನು ಅಂಗೀಕರಿಸಲಾಗದು.

ಧಾರ್ಮಿಕವಾಗಿ ಜನರನ್ನು ವಿಭಜಿಸಿ ದೇಶದ ಮಹತ್ತರವಾದ ಪ್ರಜಾಪ್ರಭುತ್ವ ಪರಂಪರೆಯನ್ನು ಕಡಿವಾಣ ಹಾಕುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂಬ ಬೇಡಿಕೆಯಿಟ್ಟು ದೇಶಾದ್ಯಂತ ನಡೆಯುವ ಹೋರಾಟದ ವಿರುದ್ಧ ಆಡಳಿತ ವರ್ಗವು ದೌರ್ಜನ್ಯ ನಡೆಸಲು ಮುಂದಾಗಿದೆ.

ಪ್ರಜಾಪ್ರಭುತ್ವ ಹಾದಿಯಲ್ಲಿ ಶಾಂತಿಯುತ ಹೋರಾಟವನ್ನು ದಬ್ಬಾಳಿಕೆಯಿಂದ ನಿಗ್ರಹಿಸಲು ಶ್ರಮಿಸಿದಲ್ಲಿ ವಿದ್ಯಾರ್ಥಿ ಸಮೂಹ ಸುಮ್ಮನಿರುವುದಿಲ್ಲ. ಆಡಳಿತ ವರ್ಗ ವಿರುದ್ಧದ ಪ್ರತಿಕ್ರಿಯೆಗಳನ್ನು ನಿಗ್ರಹಿಸಲು ಶ್ರಮಿಸಿದ್ದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು. ದೇಶವು ಅಸುರಕ್ಷಿತವಾಸ್ಥೆಗೆ ನುಗ್ಗುತ್ತಿರುವುದನ್ನು ಕಂಡು ಪ್ರಜಾಪ್ರಭುತ್ವ ಪ್ರಜ್ಞೆಯುಳ್ಳ ಪ್ರಜೆಗೆ ಮೌನ ವಹಿಸಲು ಸಾಧ್ಯವಿಲ್ಲ.

ಕ್ಯಾಂಪಸ್‌ಗಳ ಕ್ರಾಂತಿಕಾರಿ ಚೈತನ್ಯವನ್ನು ತಡೆಯಲು ಅಧಿಕಾರದ ಮಸಿಲ್ ಪವರ್ ಸಾಲದು ಎಂಬುದನ್ನು ಆಡಳಿತ ವರ್ಗ ಅರಿತಿರುವುದು ಒಳಿತು.ಜನಪ್ರಿಯ ಹೋರಾಟಗಳನ್ನು ಹಿಂಸೆಯ ಹಾದಿಯಲ್ಲಿ ನಿಗ್ರಹಿಸುವ ಬದಲು
ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿದ, ತಾರತಮ್ಯ ಕಾನೂನುಗಳನ್ನು ರದ್ದುಗೊಳಿಸುವ ಘನತೆಯನ್ನು ಕೇಂದ್ರಾಡಳಿತ ತೋರಿಸಬೇಕು.

ವಿದ್ಯಾರ್ಥಿಗಳ ಪ್ರತಿಭಟನೆಯ ವಿರುದ್ಧ ಆಡಳಿತಾರೂಢ ಭಯೋತ್ಪಾದನೆಯನ್ನು ವಿರೋಧಿಸಿ ಪ್ರಜಾಪ್ರಭುತ್ವ ರಕ್ಷಣೆಗಾಗಿ ರಾಜ್ಯವ್ಯಾಪಿ ಆಂದೋಲನವನ್ನು ಕೈಗೊಳ್ಳಬೇಕೆಂದು ಕೇರಳ ರಾಜ್ಯ ಎಸ್‌ಎಸ್‌ಎಫ್ ಕರೆ ನೀಡಿದೆ.