ನವದೆಹಲಿ ,ಸೆ.29: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ದೇವರಲ್ಲ. ಎಲ್ಲ ಪ್ರಕರಣವನ್ನು ಅವರೇ ತನಿಖೆ ಮಾಡಬೇಕೆಂದೇನೂ ಇಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸಣ್ಣ ಪ್ರಕರಣವೊಂದನ್ನು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಸ್ಥಳೀಯ ಪೊಲೀಸರಿಂದ ಸಿಬಿಐಗೆ ಹಸ್ತಾಂತರ ಮಾಡಿತ್ತು. ಈ ವಿಚಾರವನ್ನು ಸಿಬಿಐ ಪ್ರಶ್ನೆ ಮಾಡಿತ್ತು. ಈ ವೇಳೆ ನ್ಯಾಯಮೂರ್ತಿ ಎನ್ವಿ ರಮಣ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ಈ ರೀತಿ ಅಭಿಪ್ರಾಯ ಪಟ್ಟಿದೆ.
2012ರಲ್ಲಿ ಪಂಜಾಬ್ನ ವ್ಯಕ್ತಿಯೋರ್ವ ಕಾಣೆಯಾಗಿದ್ದ. ಈತನ ಸಹೋದರ ಶಿಂಬಿರ್ಸಿಂಗ್ ಈ ಬಗ್ಗೆ ಪಂಜಾಬ್-ಹರಿಯಾಣ ಹೈಕೋರ್ಟ್ಗೆ ದೂರು ನೀಡಿದ್ದ. “ನನ್ನ ತಂದೆಯಿಂದ ಕೆಲವರು ಜಾಗ ಕೊಂಡುಕೊಂಡಿದ್ದರು. ಅವರು ಹಣ ಪಡೆಯಲು ನನ್ನ ಸಹೋದರ ತೆರಳಿದ್ದ. ಅದಾದ ನಂತರದಲ್ಲಿ ಅವನು ಕಾಣೆಯಾಗಿದ್ದ. ಪ್ರಕರಣವನ್ನು ಸಿಬಿಐಗೆ ವಹಿಸಿ,” ಎಂದು ಆತ ಕೋರಿದ್ದ.
ಹೀಗಾಗಿ ಪ್ರಕರಣವನ್ನು ಹೈಕೋರ್ಟ್ ಸ್ಥಳೀಯ ಪೊಲೀಸರಿಂದ ಸಿಬಿಐಗೆ ಹಸ್ತಾಂತರ ಮಾಡಿತ್ತು. ಈ.ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದ ಸಿಬಿಐ, “ಈ ಕೇಸ್ಅನ್ನು ನಮಗೆ ವಹಿಸಿದ್ದೇಕೆ ಎಂಬುದೇ ತಿಳಿಯುತ್ತಿಲ್ಲ,” ಎಂದಿತ್ತು. ಈಗ ಕೋರ್ಟ್ ಸಿಬಿಐ ಪರವಾಗಿ ತೀರ್ಪು ನೀಡಿದೆ. “ಸಿಬಿಐ ದೇವರಲ್ಲ. ಅವರಿಗೆ ಎಲ್ಲವೂ ಗೊತ್ತಿರಲೇಬೇಕೆಂದೇನು ಇಲ್ಲ. ಕೆಲವೊಮ್ಮೆ ಎಲ್ಲ ಪ್ರಕರಣವನ್ನು ಅವರಿಂದ ಬೇಧಿಸಲು ಸಾಧ್ಯವಾಗದು,” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.






