janadhvani

Kannada Online News Paper

ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸುವವರಿಗೆ ಗುಂಡು – ಭಾರತೀಯ ಸೇನೆ ಎಚ್ಚರಿಕೆ

ನವದೆಹಲಿ: ಆರ್ಟಿಕಲ್ 370 ರದ್ದು ಹಿನ್ನೆಲೆ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸುವವರನ್ನು ಹೊಡೆದುರುಳಿಸಲಾಗುವುದು ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.

ಗೃಹ ಸಚಿವ ಅಮಿತ್ ಶಾ ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಪಾಕಿಸ್ತಾನ ಸೇನೆ ಹಾಗೂ ಅಲ್ಲಿನ ಸರ್ಕಾರ ಭಾರತದ ಮೇಲೆ ದಾಳಿ ನಡೆಯುವ ಸಾಧ್ಯತೆಗಳ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಣಿವೆ ಕಲ್ಲುತೂರಾಟಗಾರರಿಗೆ ಈಗಲೇ ಎಚ್ಚರಿಕೆ ನೀಡುತ್ತಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಕಮಾಂಡಾರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್, ಪಾಕಿಸ್ತಾನ ಹಾಗೂ ಅಲ್ಲಿನ ಸೇನೆ ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸುತ್ತಲೇ ಇವೆ. ಇದು ಈಗಲೂ ಮುಂದುವರೆಯುತ್ತದೆ ಎನಿಸುತ್ತಿದೆ.

ಕಣಿವೆ ಭಾಗದಲ್ಲಿ ನಿರ್ದಿಷ್ಟ ಘಟನೆಗಳು ನಡೆಯಲಿವೆ ಎಂದು ಪಾಕ್ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ಸೇನೆಯ ಬಗ್ಗೆ ನಾವು ಗಮನ ವಹಿಸುತ್ತೇವೆ. ಒಂದು ವೇಳೆ ಯಾರಾದರೂ ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಅವರನ್ನು ಮುಲಾಜಿಲ್ಲದೇ ಗುಂಡಿಕ್ಕಿ ಕೊಲ್ಲಲಾಗುವುದು ಎಂದು ಎಚ್ಚರಿಸಿದ್ದಾರೆ.