janadhvani

Kannada Online News Paper

ಜೆಟ್‌ಏರ್‌ವೇಸ್ ನ್ನುಕೇಂದ್ರಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು- ಶಿವಸೇನೆ

ಮುಂಬೈ, ಏ.22-: ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ ಸಾವಿರಾರು ಮಂದಿ ನೌಕರರನ್ನು ಸಲುವಾಗಿ, ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್‌ಏರ್‌ವೇಸ್ ಸಂಸ್ಥೆಯನ್ನು ತಾತ್ಕಾಲಿಕವಾಗಿ ಕೇಂದ್ರಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

ವಿಮೆ ಮತ್ತು ಏರ್‌ವೇಸ್ ಕಂಪನಿಗಳನ್ನು ಮಾಜಿ ಪ್ರಧಾನಿಗಳಾದ ಜವಹಾರ್‌ಲಾಲ್ ನೆಹರು ಮತ್ತು ಇಂದಿರಾಗಾಂಧಿಯವರು ಕೈಗೊಂಡ ಕ್ರಮಗಳನ್ನು ಪರಿಗಣನೆಗೆ ತೆಗೆದುಕೊಂಡು ಇದೇ ಮಾದರಿಯ ಕ್ರಮವನ್ನು ಪ್ರಧಾನಿಯವರು ಅನುಸರಿಸಬೇಕು ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಉಲ್ಲೇಖಿಸಿದೆ. .
25 ವರ್ಷದಷ್ಟು ಹಳೆಯದಾದ ಜೆಟ್‌ಏರ್‌ವೇಸ್‌ಗೆ ತಾತ್ಕಾಲಿಕವಾಗಿ ಬೀಗಮುದ್ರೆ ಬಿದ್ದಿರುವುದರಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದಿದೆ.

ಕಳೆದ ವಾರವಷ್ಟೇ ಜೆಟ್‌ಏರ್‌ವೇಸ್ ತನ್ನ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಂಪನಿಯನ್ನು ಉಳಿಸಲು ತುರ್ತಾಗಿ 400 ಕೋಟಿ ರೂ. ಸಾಲ ನೀಡುವಂತೆ ಮನವಿ ಮಾಡಿತ್ತು.
ನಷ್ಟದಲ್ಲಿರುವ ಜೆಟ್‌ಏರ್‌ವೇಸ್‌ನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಉದ್ಯೋಗ ಕಳೆದುಕೊಳ್ಳುತ್ತಿರುವ ನೌಕರರ ನೆರವಿಗೆ ಧಾವಿಸಬೇಕೆಂದು ಉದ್ಧವ್‌ಠಾಕ್ರೆ ಒತ್ತಾಯಿಸಿದ್ದಾರೆ.