janadhvani

Kannada Online News Paper

ಕಾಂಗ್ರೆಸ್ ಚುನಾವಣಾ ಘೋಷವಾಕ್ಯ “ಅಬ್ ಹೋಗಾ ನ್ಯಾಯ್”

ನವದೆಹಲಿ,ಏ.7(ಪಿಟಿಐ)- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು “ಅಬ್ ಹೋಗಾ ನ್ಯಾಯ್” ಎಂಬ ಚುನಾವಣಾ ಪ್ರಚಾರದ ಘೋಷವಾಕ್ಯವನ್ನು ಬಿಡುಗಡೆ ಮಾಡಿದೆ.

ದೆಹಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡ ಆನಂದ್ ಶರ್ಮ ಕಾಂಗ್ರೆಸ್‍ನ ಚುನಾವಣಾ ಪ್ರಚಾರದ ಸ್ಲೋಗನ್ ಮತ್ತು ಥೀಮ್ ಸಾಂಗ್(ಧ್ಯೇಯ ಗೀತೆ)ನ್ನು ಬಿಡುಗಡೆಗೊಳಿಸಿದರು.ದೇಶದ ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ಪಕ್ಷದ ಹೆಗ್ಗುರಿಯಾಗಿದೆ.

ಬಡವರಿಗೆ ಕನಿಷ್ಠ ಆದಾಯ ಜೊತೆಗೆ ದೇಶದ ಎಲ್ಲರಿಗೂ ಸಾಮಾಜಿಕ ನ್ಯಾಯ ಮತ್ತು ಸ್ಥಿರತೆ ಒದಗಿಸುವುದು ಪಕ್ಷದ ಧ್ಯೇಯವಾಗಿದೆ ಎಂದು ಶರ್ಮ ಹೇಳಿದರು. ನ್ಯಾಯ್ ಹೆಸರಿನಲ್ಲೇ ನಾವು ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.

ಕಾಂಗ್ರೆಸ್‍ನ ಚುನಾವಣಾ ಪ್ರಚಾರ ಥೀಮ್‍ಸಾಂಗ್‍ಗೆ ಖ್ಯಾತ ಗೀತರಚನಾಕಾರ ಜಾವೇದ್ ಅಖ್ತರ್ ಸಾಹಿತ್ಯ ಒದಗಿಸಿದ್ದಾರೆ. ಹೆಸರಾಂತ ಸಾಕ್ಷಿ ಚಿತ್ರ ನಿರ್ದೇಶಕ ನಿಖಿಲ್ ಅಡ್ವಾನಿ ಹೊಸ ಪರಿಕಲ್ಪನೆಯಲ್ಲಿ ಈ ಗೀತೆಗೆ ದೃಶ್ಯ ಮತ್ತು ಶ್ರವ್ಯ ರೂಪ ನೀಡಿದ್ದಾರೆ.