janadhvani

Kannada Online News Paper

ಅರುಣಾಚಲ ಪ್ರದೇಶ: 2 ಸಚಿವರು ಸಮೇತ 18 ನಾಯಕರು ಬಿಜೆಪಿಗೆ ಗುಡ್ ಬೈ

ನವದೆಹಲಿ: ಇನ್ನೇನು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಆಡಳಿತಾತ್ಮಕ ಬಿಜೆಪಿಗೆ ಅರುಣಾಚಲ ಪ್ರದೇಶದಲ್ಲಿ ಭಾರಿ ಹಿನ್ನಡೆ ಉಂಟಾಗಿದ್ದು, ಪಕ್ಷದ 18 ಹಿರಿಯ ನಾಯಕರು ಎನ್‌ಪಿಪಿ ಸೇರ್ಪಡೆಗೊಂಡಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಜರ್ಪುಮ್‌ ಗಂಬಿನ್‌, ಗೃಹ ಸಚಿವ ಕುಮಾರ್‌ ವಾಯ್‌ ಮತ್ತು ಪ್ರವಾಸೋದ್ಯಮ ಸಚಿವ ಜಾರ್ಕರ್‌ ಗಾಮ್ಲಿನ್‌ ಮತ್ತು ಆರು ಜನರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಇದೇ ಬೆನ್ನಲ್ಲೇ 18 ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾನ್ರಾಡ್‌ ಸಂಗ್ಮಾ ಅವರ ರಾಷ್ಟ್ರೀಯ ಪೀಪಲ್ಸ್‌ ಪಕ್ಷ(NPP)ಕ್ಕೆ ಸೇರ್ಪಡೆಗೊಂಡಿದ್ದಾರೆ.

ಅಸ್ಸಾಂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಗೃಹ ಸಚಿವ ಕುಮಾರ್ ವಾಯ್, ಪ್ರವಾಸೋದ್ಯಮ ಸಚಿವ ಜರ್ಕರ್ ಗಮ್ಲಿನ್ ಸೇರಿದಂತೆ, ಶಾಸಕರಾಗಿದ್ದ ಥಂಗ್‌ವಾಂಗ್‌ ವಂಘಮ್‌, ತಾಪುಕ್‌ ತಾಕು, ಪನಿ ತರಾಮ್‌, ಪಂಗ್ಕಾ ಬಾಗೆ, ವಾಂಗ್ಲಿಂಗ್‌ ಲೊವಂಡೊಂಗ್‌ ಮತ್ತು ಕಾರ್ದೊ ನ್ಯಿಗ್ಯೊರ್‌ ಮತ್ತು ಮಾಜಿ ಸಚಿವ ಸೆರಿಂಗ್‌ ಜರ್ಮಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ಒಟ್ಟಾರೆ 60 ವಿಧಾನಸಭೆ ಕ್ಷೇತ್ರಗಳಲ್ಲಿ ಕನಿಷ್ಟ 30 – 40 ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲ ಸೀಟುಗಳನ್ನು ಗೆಲ್ಲುವ ಮೂಲಕ ನಾವೇ ಸರ್ಕಾರವನ್ನು ರಚಿಸುತ್ತೇವೆ ಎಂದು ಎನ್‌ಪಿಪಿ ನಾಯಕ ಥಾಮಸ್‌ ಸಂಗ್ಮಾ ತಿಳಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯು 54 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಈಶಾನ್ಯ ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ತೀರ್ಮಾನಿಸಿದ್ದ ಬಿಜೆಪಿಯ ಪ್ರಮುಖ ಮಿತ್ರಪಕ್ಷದ ಮುಖ್ಯಸ್ಥ ಸಂಗ್ಮಾ ಎಲ್ಲ 25 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವುದಾಗಿ ಹೇಳಿದ್ದರು.

ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಿನ್ನಮತೀಯ ಶಾಸಕರು, ಸಚಿವರು ಎನ್ ಪಿಪಿಯ ಪ್ರಧಾನ ಕಾರ್ಯದರ್ಶಿ ಥಾಮಸ್ ಸಂಗ್ಮಾ ಅವರನ್ನು ಭೇಟಿ ಮಾಡಿ, ಪಕ್ಷ ಸೇರ್ಪಡೆಗೊಂಡಿದ್ದಾರೆ.