ಬೆಂಗಳೂರು,ಮಾರ್ಚ್.20: ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪಿಗಳನ್ನು ರಾಜ್ಯದ ವಶಕ್ಕೆ ಪಡೆಯಬೇಕು ಹಾಗೂ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹಿಜಾಬ್ ವಿಚಾರವಾಗಿ ತೀರ್ಪು ನೀಡಿದ್ದಕ್ಕೆ ಹೈಕೋರ್ಟ್ ನ್ಯಾಯಾಧೀಶರ ಮೇಲೆ ತಮಿಳುನಾಡಿನಲ್ಲಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು, ಈ ಕುರಿತು ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಎಲ್ಲ ಅವಕಾಶ ಇದೆ. ಆದ್ರೆ, ಒಂದು ವ್ಯವಸ್ಥೆಗೆ ಬೆದರಿಕೆ ಹಾಕುವ ಕೆಲಸ ಆಗಿದೆ. ವ್ಯವಸ್ಥೆ ವಿರುದ್ಧ ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಇದನ್ನು ದಮನ ಮಾಡಬೇಕಿದೆ. ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದ್ದು, ನಿನ್ನೆ ಬಾರ್ ಕೌನ್ಸಿಲ್ ನವರು ಬಂದು ದೂರು ನೀಡಿದ್ದಾರೆ. ಆರೋಪಿಗಳನ್ನು ನಮ್ಮ ರಾಜ್ಯದ ವಶಕ್ಕೆ ತೆಗೆದಕೊಳ್ಳಬೇಕು. ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾವೆಲ್ಲ ಸೆಕ್ಷನ್ ಹಾಕಬೇಕು ಅದನ್ನು ಹಾಕಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ಬೆದರಿಕೆ ಬಂದ ಹಿನ್ನೆಲೆಯಲ್ಲಿ ಜಡ್ಜ್ ಗೆ ವೈ ಭದ್ರತೆ ನೀಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಈ ಘಟನೆ ನಡೆದ ಮೂರು ದಿನ ಆಗಿದ್ರೂ ಸಹ ಜ್ಯಾತ್ಯಾತೀತವಾದಿಗಳು ಮೌನವಾಗಿದ್ದಾರೆ. ಒಂದು ವರ್ಗದ ಜನರನ್ನು ಹೆಚ್ಚು ಒಲೈಕೆ ಮಾಡ್ತಿರುವುದು ನಿಜವಾದ ಕೋಮುವಾದ. ಪ್ರಜಾಪ್ರಭುತ್ವವನ್ನು ನಾವೂ ಎತ್ತಿ ಹಿಡಿಯುತ್ತೇವೆ. ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದರು.







