janadhvani

Kannada Online News Paper

ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ- ದುಬೈ ನಲ್ಲಿ ರಾಹುಲ್ ಗಾಂಧಿ

ದುಬೈ: “ನಾನು ಮನ್ ಕಿ ಬಾತ್ ಕೇಳಲು ಬಂದಿಲ್ಲ. ಬದಲಿಗೆ ನಿಮ್ಮ ನಿಜವಾದ ಮನದ ಮಾತು ಆಲಿಸಲು ಬಂದಿದ್ದೇನೆ. ನಿಮಗೆ ಯಾವುದೇ ಸಮಸ್ಯೆಯಿದ್ದರೂ ನನ್ನ ಬಳಿ ಹಂಚಿಕೊಳ್ಳಿ. ನಾನು ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ” ಇದು ರಾಹುಲ್ ಗಾಂಧಿ ದುಬೈಯಲ್ಲಿ ಇಂದು ಮಾಡಿದ ಭಾಷಣದ ತುಣುಕು.

ಎರಡು ದಿನಗಳ ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅನಿವಾಸಿ ಭಾರತೀಯರ ನೆರವಿಗೆ ಧಾವಿಸುವುದಾಗಿ ಹೇಳಿದ್ದಾರೆ.

ದುಬೈನ ಜಬಲ್‌ ಅಲಿ ಲೇಬರ್‌ ಕಾಲೋನಿಯಲ್ಲಿ ಭಾರತೀಯ ಕಾರ್ಮಿಕರನ್ನು ಉದ್ದೇಶಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾತನಾಡಿದರು. ಈ ವೇಳೆ ನಾನು ನಿಮ್ಮೊಂದಿದ್ದೇನೆ. ಇಲ್ಲಿ ಯಾವುದೇ ರೀತಿಯ ಮನ್ ಕಿ ಬಾತ್ ಕೇಳಲು ಬಂದಿಲ್ಲ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೆಲಸ ಮಾಡಲು ಬಂದಿದ್ದೇನೆ. ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಏನೇ ಆಗಿದ್ದರು ಧೈರ್ಯವಾಗಿ ಹೇಳಿಕೊಳ್ಳಿ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ರಾಹುಲ್ ಆಶ್ವಾಸನೆ ನೀಡಿದರು.

ಇಲ್ಲಿಯೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ರಾಹುಲ್, ಎನ್ಡಿಎ ಸರ್ಕಾರ ಶ್ರೀಮಂತರ ಪರವಾಗಿದೆ. ರೈತ ಕೂಲಿ-ಕಾರ್ಮಿಕರಿಗೆ ಯಾವುದೇ ನೆರವು ನೀಡಲು ಮೋದಿ ಸರ್ಕಾರ ಮುಂದಾಗಿಲ್ಲ. ಅವರು ರೆಡಿಯೋದಲ್ಲಿ ಬರುವ ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕವೇ ಸಮಸ್ಯೆಯನ್ನು ಆಲಿಸುತ್ತಾರೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಉದ್ದುದ್ದ ಭಾಷಣ ಬಿಗಿದ ಮಾತ್ರಕ್ಕೆ ಜನರ ಹೊಟ್ಟೆ ತುಂಬದು ಎಂದು ಮೋದಿ ವಿರುದ್ಧ ಕುಟುಕಿದ್ದಾರೆ. ಅಲ್ಲದೇ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮೋದಿಯನ್ನು ಸೋಲಿಸುವುದಾಗಿಯೂ ತಿಳಿಸಿದ್ದಾರೆ.