janadhvani

Kannada Online News Paper

ಗ್ಯಾಸ್ ಗೀಸರ್‍ನಿಂದ ಅನಿಲ ಸೋರಿಕೆ: ಸ್ನಾನದ ಕೊಠಡಿಯಲ್ಲಿ ದಂಪತಿಗಳ ಮರಣ

ಬೆಂಗಳೂರು,ಜು.11-ಗ್ಯಾಸ್ ಗೀಸರ್‍ನಿಂದ ಅನಿಲ ಸೋರಿಕೆ ಉಂಟಾಗಿ ದಂಪತಿ ಮೃತಪಟ್ಟಿದ್ದಾರೆ ಎಂದು ಶಂಕಿಸಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಫ್ಲ್ಯಾಟ್‍ನ ಸ್ನಾನದ ಕೊಠಡಿಯಲ್ಲಿ ವೆಂಟಿಲೇಟರ್ ಸರಿಯಾದ ರೀತಿ ಇಲ್ಲದ ಕಾರಣ ದಂಪತಿ ಮೃತಪಟ್ಟಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ನಾನದ ಕೋಣೆಯಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‍ನಿಂದ ಅನಿಲ ಸೋರಿಕೆಯಾಗಿದ್ದು, ಈ ಅನಿಲ ವೆಂಟಿಲೇಟರ್ ಮೂಲಕ ಹೊರಗೆ ಹೋಗಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲವೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಮಹೇಶ್ ಹಾಗೂ ಶೀಲಾ ದಂಪತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರವೇ ಸಾವು ಹೇಗೆ ಸಂಭವಿಸಿದೆ ಎಂಬುದು ತಿಳಿದುಬರಲಿದೆ.  ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆಯ ಶಿವಗಂಗಾ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಸಾಫ್ಟ್‍ವೇರ್ ಕಂಪನಿಯ ಉದ್ಯೋಗಿ ಮಹೇಶ್ ಹಾಗೂ ಪತ್ನಿ ಶೀಲ ನಿನ್ನೆ ಸ್ನಾನದ ಕೊಠಡಿಯಲ್ಲಿ ಮೃತಪಟ್ಟಿದ್ದರು.