janadhvani

Kannada Online News Paper

ಯುಎಸ್ಎಸ್ ಯುದ್ಧನೌಕೆಯ ಮೇಲೆ ದಾಳಿ- ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ ಇರಾನ್

'ಆಕ್ರಮಣಕಾರಿ ಭಯೋತ್ಪಾದಕರ ಸ್ಮಶಾನವಾಗಿ ಭೂಮಿ ಮತ್ತು ಸಮುದ್ರವು ಬದಲಾಗಲಿದೆ' ಎಂದು ಇರಾನ್ ಎಚ್ಚರಿಕೆ ನೀಡಿದೆ.

ಟೆಹ್ರಾನ್: ಇರಾನ್‌ನ ಪರಮೋನ್ನತ ನಾಯಕ ಆಯತುಲ್ಲಾಹ್ ಅಲಿ ಖಮನಾಇ ಹತ್ಯೆಯ ಬೆನ್ನಲ್ಲೇ ಇರಾನ್ ಪ್ರತೀಕಾರ ತೀವ್ರಗೊಳಿಸಿದೆ. ಗಲ್ಫ್ ವಲಯದಲ್ಲಿ ಬೀಡುಬಿಟ್ಟಿದ್ದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆಯ ಮೇಲೆ ಇರಾನ್ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಅಮೆರಿಕದ ಯುದ್ಧನೌಕೆಯ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ. ‘ಆಕ್ರಮಣಕಾರಿ ಭಯೋತ್ಪಾದಕರ ಸ್ಮಶಾನವಾಗಿ ಭೂಮಿ ಮತ್ತು ಸಮುದ್ರವು ಬದಲಾಗಲಿದೆ’ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಜನವರಿ ಅಂತ್ಯದಿಂದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆಯು ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಇರಾನ್ ದಾಳಿಯಿಂದ ಹಡಗಿಗೆ ಹಾನಿಯಾಗಿದೆಯೇ ಅಥವಾ ಅಧಿಕಾರಿಗಳಿಗೆ ಗಾಯಗಳಾಗಿದೆಯೇ ಎಂಬ ಬಗ್ಗೆ ಅಮೆರಿಕದ ಸೇನೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಆಯತುಲ್ಲಾಹ್ ಅಲಿ ಖಮನಾಇ ಹತ್ಯೆಯಾದ ನಂತರ ಇರಾನ್ ತನ್ನ ದಾಳಿಯನ್ನು ಚುರುಕುಗೊಳಿಸಿದೆ.

ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಇಸ್ರೇಲ್‌ನಲ್ಲಿ ಇಂದು ಮತ್ತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಆರಂಭದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇತ್ತಾದರೂ, ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ. 23ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ, ಬ್ರಿಟನ್ ಸೇನಾ ನೆಲೆಗಳನ್ನು ಹೊಂದಿರುವ ಸೈಪ್ರಸ್ ಗುರಿಯಾಗಿಸಿಕೊಂಡೂ ಇರಾನ್ ಎರಡು ಕ್ಷಿಪಣಿಗಳನ್ನು ಉಡಾಯಿಸಿದೆ.

ಕ್ಷಿಪಣಿಗಳು ಸೈಪ್ರಸ್‌ನಲ್ಲಿರುವ ಬ್ರಿಟಿಷ್ ಸೇನಾ ನೆಲೆಗಳ ದಿಕ್ಕಿನಲ್ಲಿ ಬಂದಿವೆ, ಆದರೆ ಅವು ನೇರವಾಗಿ ನೆಲೆಗಳನ್ನೇ ಗುರಿಯಾಗಿಸಿಕೊಂಡಿದ್ದವೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಬ್ರಿಟಿಷ್ ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಹೇಳಿದ್ದಾರೆ.