ಮಂಗಳೂರು, ಫೆ.17: ಇಂದು ರಂಝಾನ್ ತಿಂಗಳ ಚಂದ್ರದರ್ಶನವಾಗದ ಕಾರಣ ನಾಳೆ (ಬುಧವಾರ) ಶಅಬಾನ್ 30 ಪೂರ್ತಿಗೊಳಿಸಿ ಗುರುವಾರ(ಫೆ. 19)ರಂಝಾನ್ ಮೊದಲ ದಿನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿಗಳು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ, ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ಉಳ್ಳಾಲ ಸಂಯುಕ್ತ ಜಮಾಅತ್ ಖಾಝಿಗಳಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 19-2026 ಗುರುವಾರದಿಂದ ರಂಜಾನ್ ಆರಂಭಗೊಳ್ಳಲಿದ್ದು, ಈ ತಿಂಗಳನ್ನು ಮುಸ್ಲಿಮ್ ಸಮಾಜವು ಬಹಳ ಪವಿತ್ರ ಮತ್ತು ಭಕ್ತಿಯಿಂದ ಕಾಣುತ್ತದೆ. ಈ ತಿಂಗಳ ಹಗಲಿನಲ್ಲಿ ಕಡ್ಡಾಯ ವೃತವನ್ನು ಆಚರಿಸಿ ಹೆಚ್ಚೆಚ್ಚು ಪುಣ್ಯ ಕರ್ಮಗಳಲ್ಲಿ ತಮ್ಮನ್ನು ತೊಡಗಿಸುತ್ತಾರೆ. ರಾತ್ರಿಯಲ್ಲಿ ರಂಜಾನ್ನ ಪ್ರತ್ಯೇಕ ಪ್ರಾರ್ಥನೆಯಾದ ತರಾವೀಹ್ ನಲ್ಲೂ ಇತರ ಪ್ರಾರ್ಥನೆಗಳಲ್ಲೂ ಭಾಗಿಯಾಗುತ್ತಾರೆ.
ಇಸ್ಲಾಮ್ ಎಂಬ ಶಾಂತಿಯ ಸಂಕೇತವಾಗಿರುವ ಧರ್ಮದ ಅನುಯಾಯಿಗಳಾದ ಮುಸಲ್ಮಾನರು ಸದಾ ಶಾಂತಿಯನ್ನೇ ಬಯಸುವವರೂ, ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ , ಇತರರೊಂದಿಗೆ ದಯೆಯನ್ನು ತೋರುವವರೂ, ಸಹಾಯ ಹಸ್ತವನನ್ನು ಚಾಚುವವರೂ ಆಗಿರುತ್ತಾರೆ. ಅದು ಅಲ್ಲಾಹನ ಮತ್ತು ಪ್ರವಾದಿ ಪೈಗಂಬರರ ಸಂದೇಶವಾಗಿರುತ್ತದೆ. ರಂಜಾನ್ ತಿಂಗಳಿನಲ್ಲಿ ನಡೆಸುವ ಪ್ರತಿಯೊಂದು ಪುಣ್ಯ ಕಾರ್ಯಗಳಿಗೆ 70 ಪಟ್ಪು ಹೆಚ್ಚು ಪ್ರತಿಫಲ ದೊರೆಯುತ್ತಿದೆ.
ರಂಜಾನ್ ಸಾಮಾನ್ಯವಾಗಿ 29 ಅಥವಾ 30 ದಿನಗಳಿರಲಿದೆ. ರಂಜಾನ್ನ 29 ನೇ ದಿನ ಶವ್ವಾಲ್ ತಿಂಗಳ ಚಂದ್ರ ದರ್ಶನವು ಇದರ ಅವಧಿಯನ್ನು ನಿರ್ಧರಿಸುತ್ತದೆ.ಅಂದು ಚಂದ್ರ ದರ್ಶನವಾದಲ್ಲಿ ಮರುದಿನ ಈದುಲ್ ಫಿತರ್ ಆಚರಿಸಲಾಗುತ್ತದೆ. ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದಿದ್ದಲ್ಲಿ ರಂಜಾನ್ 30 ದಿನ ಪೂರ್ತೀಕರಿಸಿ ಮರುದಿನ ಈದ್ ಆಚರಿಸಲಾಗುತ್ತದೆ.






