ಅಹ್ಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಪತನಗೊಂಡು ಪ್ರಯಾಣಿಕರೆಲ್ಲರೂ ಮೃತಪಟ್ಟಿದ್ದಾರೆ. ಇದು 242 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವಾಗಿತ್ತು.
ವಿಮಾನ ದುರಂತದಲ್ಲಿ ಗುಜರಾತ್ ನ ಮಾಜಿ ಸಿಎಂ ವಿಜಯ್ ರುಪಾನಿಯವರು ಮೃತಪಟ್ಟಿರುವುದು ಖಾತ್ರಿಯಾಗಿದೆ. ವಿಮಾನದಲ್ಲಿದ್ದ ಎಲ್ಲಾ 242 ಪ್ರಯಾಣಿಕರು (ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ) ಸಾವನ್ನಪ್ಪಿರುವುದು ಬಹುತೇಕ ಖಾತ್ರಿಯಾಗಿದ್ದು, ಅವರಲ್ಲೊಬ್ಬರಾಗಿದ್ದ ವಿಜಯ್ ರುಪಾನಿ ಕೂಡ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂ.12ರಂದು ಮಧ್ಯಾಹ್ನ ಸುಮಾರು 1.17ರ ಸುಮಾರಿಗೆ ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ ಕೆಲವೇ ನಿಮಿಷಗಳಲ್ಲಿ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಅಹ್ಮದಾಬಾದ್ ನ ಮೇಘಾನಿ ನಗರ್ ನಲ್ಲಿ ಪತನವಾಗಿದೆ. ಆಕಾಶದಲ್ಲಿ ಸಾಗುತ್ತಿರುವಾಗಲೇ ಹಂತಹಂತವಾಗಿ ಕೆಳಕ್ಕೆ ಬಂದ ವಿಮಾನ ನೋಡನೋಡುತ್ತಲೇ ಮೇಘಾನಿ ನಗರ್ ನಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿ ಪತನವಾಗಿದೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದರು.
ಇದೀಗ ಬಂದ ಮಾಹಿತಿ ಪ್ರಕಾರ ವಿಮಾನದಲ್ಲಿದ್ದ 242 ಪ್ರಯಾಣಿಕರೆಲ್ಲಾ ಸಾವನ್ನಪ್ಪಿದ್ದಾರೆ. ಲಂಡನ್ಗೆ ತೆರಳುತ್ತಿದ್ದ ವಿಮಾನ ಗುಜರಾತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಹೊರಟ ಐದು ನಿಮಿಷಗಳ ನಂತರ ವಸತಿ ಪ್ರದೇಶದಲ್ಲಿ ಪತನಗೊಂಡಿತು.ವಿಮಾನ ಪತನವಾಗುತ್ತಿದ್ದ ಹಾಗೆಯೇ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ.
ಪತನಗೊಂಡ ವಿಮಾನದಲ್ಲಿ 230 ಪ್ರಯಾಣಿಕರು, ಪೈಲಟ್ – ಕೋ ಪೈಲಟ್ ಹಾಗು ವಿಮಾನ ಸಿಬ್ಬಂದಿ ಸೇರಿ ಒಟ್ಟು 242 ಜನರಿದ್ದರು. ಪ್ರಯಾಣಿಕರಲ್ಲಿ 52 ಮಂದಿ ಬ್ರಿಟನ್ ನಾಗರಿಕರಾಗಿದ್ದು, 7 ಮಂದಿ ಪೋರ್ಚಗಲ್ ನಾಗರಿಕರಾಗಿದ್ದರು. ಇನ್ನು, ಒಬ್ಬ ಕೆನಡಾದವರು ಇದ್ದರು. ಉಳಿದ 169 ಮಂದಿ ಭಾರತೀಯರು. ಇವರಲ್ಲಿ 10 ಮಕ್ಕಳೂ ಸೇರಿದ್ದರು ಎಂದು ಹೇಳಲಾಗಿದೆ.








