janadhvani

Kannada Online News Paper

ಕೋಟೆಕಾರಿನ ಪುರುಷೋತ್ತಮ ಅಡ್ಕರವರು ರಿಯಾದಿನಲ್ಲಿ ನಿಧನ. ಮೃತದೇಹವನ್ನು ಊರಿಗೆ ತಲುಪಿಸಲು ಸಹಕರಿಸಿದ ಕೆಸಿಎಫ್ ರಿಯಾದ್

ಕಳೆದವಾರ ರಿಯಾದಿನ ನಸೀಂ ಪ್ರಾಂತ್ಯದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ಪುರುಷೋತ್ತಮ ಅಡ್ಕರವರ ಮೃತದೇಹವನ್ನು ಊರಿಗೆ ತಲುಪಿಸುವ ಕೆಲಸವು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಯಿತು.

ಮರಣ ವಾರ್ತೆ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಿಧನರಾಗುವ ಅನಿವಾಸಿಗಳ ಮೃತದೇಹವನ್ನು ಇಲ್ಲಿ ದಫನ ಮಾಡುವುದು ಅಥವಾ ಊರಿಗೆ ಕೊಂಡೊಯ್ಯುವುದಿದ್ದರೆ ವಲಸೆ ನೀತಿಗೆ ಸಂಬಂಧಿಸಿದ ಹಲವಾರು ದಾಖಲೆ ಪತ್ರಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಧೂತವಾಸ ಕೇಂದ್ರ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಸಿಗಬೇಕಾದ ದಾಖಲೆಗಳನ್ನು ಸರಿಪಡಿಸಲು ಕೆಸಿಎಫ್ ಸಾಂತ್ವನ ಇಲಾಖೆಯ ನಾಯಕರಾದ ಮಜೀದ್ ವಿಟ್ಲ, ಬಾಷಾ ಗಂಗಾವಳಿ, ಅಶ್ರಫ್ ಕೆಎಮ್ಮೆಸ್ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಸಿಎಫ್ ರಿಯಾದ್ ಝೋನ್ ನಾಯಕರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಇದಕ್ಕಾಗಿ ಶ್ರಮಿಸಿದರ ಫಲವಾಗಿ ಅತೀ ಶೀಘ್ರದಲ್ಲಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮೃತದೇಹವನ್ನು ಊರಿಗೆ ಕಳುಹಿಸಲು ಸಾಧ್ಯವಾಯಿತು. ಕೆಸಿಎಫ್ ರಿಯಾದ್ ತಂಡದ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

15/09/24ರಂದು ಆದಿತ್ಯವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಮೃತದೇಹವನ್ನು ಮೃತರ ಸಂಬಂಧಿ ಲೋಕೇಶ್ ಬೊಲಾರ್ ರವರು ಸ್ವೀಕರಿಸಿ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಮೃತರ ಸ್ವಗೃಹಕ್ಕೆ ತಲುಪಿಸಲಾಗಿದೆ. ವಿಮಾನ ನಿಲ್ದಾಣದಿಂದ ಮೃತದೇಹವನ್ನು ಕೋಟೆಕಾರಿಗೆ ತಲುಪಿಸುವ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಹಾಗೂ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಶಾಕಿರ್ ಎಂಎಸ್ಇ ಹಾಗೂ ನಾಯಕರಾದ ಸಿದ್ದೀಖ್ ಬಜ್ಪೆ, ಶಾಹಿಕ್ ಬಜ್ಪೆ, ಶಕೀಲ್ ಬಜ್ಪೆ ಉಪಸ್ಥಿತರಿದ್ದರು. ಮೃತರು ಪತ್ನಿ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

error: Content is protected !! Not allowed copy content from janadhvani.com