ನವದೆಹಲಿ: ಭಾರತ ಸಂದರ್ಶನದಲ್ಲಿರುವ ಸೌದಿ ಅರೇಬಿಯಾದ ಹಜ್ ಸಚಿವರಾದ ತೌಫೀಖ್ ಬಿನ್ ಫೌಝಾನ್ ಅಲ್ ರಬೀಅ, ಹಜ್ ಉಮ್ರಾ ಯಾತ್ರಾರ್ಥಿಗಳಿಗೆ ವೀಸಾ ಪ್ರಕ್ರಿಯೆಗಳನ್ನು ಸರಾಗಗೊಳಿಸಲಾಗುವುದು ಎಂದು ಘೋಷಿಸಿದರು. ಇದೇ ವೇಳೆ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಜೊತೆಗಿದ್ದರು.
ಉಮ್ರಾ ಯಾತ್ರಿಕರ ಸುಗಮ ಪ್ರಯಾಣಕ್ಕಾಗಿ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಹೆಚ್ಚಿನ ನೇರ ವಿಮಾನಗಳನ್ನು ಪ್ರಾರಂಭಿಸಲಾಗುವುದು ಎಂದು ಸೌದಿ ಹಜ್ ಸಚಿವರು ಹೇಳಿದರು. ಕಡಿಮೆ ವೆಚ್ಚದ ವಿಮಾನಗಳ ಸೇವೆ ಆರಂಭಿಸುವ ಬಗ್ಗೆಯೂ ಪರಿಗಣನೆಯಲ್ಲಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಹಜ್ ಯಾತ್ರಿಕರಿಗೆ ಸೌದಿ ಅರೇಬಿಯಾ ನೀಡಿದ ಬೆಂಬಲಕ್ಕೆ ಸ್ಮೃತಿ ಇರಾನಿ ಕೃತಜ್ಞತೆ ಸಲ್ಲಿಸಿದರು. ಸೌದಿ ಹಜ್ ಮತ್ತು ಉಮ್ರಾ ಸಚಿವ ತೌಫೀಖ್ ಅಲ್ ರಬೀಅ ಅವರು ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಎರಡು ದೇಶಗಳ ನಡುವಿನ ಪರಸ್ಪರ ಸಹಕಾರವನ್ನು ಬಲಪಡಿಸುವುದು ಮತ್ತು ಉಮ್ರಾ ಯಾತ್ರೆಗೆ ಅಂತರಾಷ್ಟ್ರೀಯ ಯಾತ್ರಿಕರ ಪ್ರಯಾಣವನ್ನು ಸುಗಮಗೊಳಿಸುವುದು ಭೇಟಿಯ ಉದ್ದೇಶವಾಗಿದೆ.