janadhvani

Kannada Online News Paper

ಮುತಾಲಿಕ್‌ನಂತವರನ್ನು ಒದ್ದು ಒಳಗಡೆ ಹಾಕದಿದ್ದಲ್ಲಿ ಶಾಂತಿ ನೆಲೆಸುವುದು ಅಸಾಧ್ಯ-ಮಾಜಿ ಸಿಎಂ

ಬಾಗಲಕೋಟೆ: ಇದು ರಾಮ ಸೇನೆಯೋ, ರಾವಣ ಸೇನೆಯೋ? ಪ್ರಮೋದ್‌ ಮುತಾಲಿಕ್‌ನಂತವರನ್ನು ಒದ್ದು ಒಳಗಡೆ ಹಾಕದೇ ಹೋದರೇ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಶ್ರೀರಾಮ ಸೇನೆ ವಿರುದ್ಧ ಕಿಡಿಕಾರಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಆಝಾನ್‌ ವರ್ಸಸ್‌ ಸುಪ್ರಭಾತ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ವಿಷಯಗಳು ಬೃಹದಾಕಾರವಾಗಿ ಬೆಳೆಯಲು ಸಕಾ೯ರ ಮೌನವಾಗಿ ಒಪ್ಪಿಗೆ ಸೂಚಿಸುವುದನ್ನು ನಿಲ್ಲಿಸಬೇಕು. ಸಮಾಜದ ಸಾಮರಸ್ಯ ಹಾಳಾದ ಮೇಲೆ ರಿಪೇರಿ ಮಾಡಲಿಕ್ಕಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಬೆಳಿಗ್ಗೆಯಿಂದ ನೋಡಿದ್ದೇನೆ. ಇದು ರಾಮ ಸೇನೆನೋ, ರಾವಣನ ಸೇನೆನೋ ಇದೊಂದು ಕಡೆ ಇರಲಿ. ಇವತ್ತಿನಿಂದ ಶುರು ಮಾಡಿದ್ದಾರಾ ಹನುಮಾನ ಚಾಲೀಸಾ? ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಪ್ರಮಾಣದಲ್ಲಿ ಸ್ಪೀಕರ್‌ ಇರಲಿ. ಸರ್ಕಾರ ಇದಕ್ಕೆ ಪರ್ಮಿಷನ್ ಕೊಟ್ಟು ಬಿಡಲಿ. ಇದಕ್ಕೇನು ದೊಡ್ಡ ಪ್ರಚಾರದ ಅವಶ್ಯಕತೆ ಇಲ್ಲ ಎಂದರು.

ಹಿಂದುತ್ವ ಉಳಿಸೋಕೆ ಹನುಮಾನ ಚಾಲೀಸಾ ಹೇಳ್ತಿದ್ದಾರೆ ಅಂತ ಏನಿಲ್ಲ. ದಿನಂಪ್ರತಿ ಮನೆಯಲ್ಲಿ ನಾವು ಹೇಳೋಲ್ವೆ. ಏನಾದ್ರೂ ಸಮಸ್ಯೆ ಆದ್ರೆ, ಆರೋಗ್ಯ ತೊಂದರೆ ಆದ್ರೆ ಹನುಮಾನ್ ಚಾಲೀಸಾ ಹೇಳ್ತೀವಿ. ಇದೇನು ದೊಡ್ಡ ಸಾಧನೆ ಏನಲ್ಲ. ಸಮಾಜದಲ್ಲಿ ಬೆಂಕಿ ಇಡತಕ್ಕಂತವರಿದ್ದಾರಲ್ಲ, ಟಿವಿ ಮುಂದೆ ಮಾತನಾಡೋರು ಪ್ರಮೋದ ಮುತಾಲಿಕ್ ಅವ್ಯಾವೋ ಇದ್ದಾವಲ್ಲ. ಮೊದಲು ಇವರನ್ನು ಒದ್ದು ಒಳಗಡೆ ಹಾಕದೇ ಇದ್ದರೆ ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ನೆಲೆಸಲು ಕಷ್ಟ ಎಂದು ಹೇಳಿದರು.

ನಮಗೆ ಇದೆಲ್ಲಾ ಬೇಕಾಗಿಲ್ಲ. ಹೋದ ವರ್ಷದ ಬೆಳೆ ವಿಮೆ ದುಡ್ಡೇ ಬಂದಿಲ್ಲ. ಇದಕ್ಕೆ ನಮ್ಮ ಹೋರಾಟ ಇರಬೇಕು. ಏನು ಗಂಟೆ ಬಾರಿಸಿದರೆ ನಿಮಗೆಲ್ಲಾ ಸಿಕ್ಕಿ ಬಿಡುತ್ತಾ. ಈ ನಡುವೆ 120 ರೂ. ಪೆಟ್ರೋಲ್, 100 ರೂ. ಡಿಸೇಲ್, ಸಾವಿರ ರೂಪಾಯಿ ಗ್ಯಾಸ್ ರೇಟ್ ಆಗಿದೆ. ಈ ಬಗ್ಗೆ ನೀವ್ಯಾರು ಮಾತನಾಡೋಕೆ ರೆಡಿ‌ ಇಲ್ಲ. ಈ ವಿಷಯ ಹಿಡಿದುಕೊಂಡು ನಾವು ಹೊರಟಿದ್ದೇವೆ. ಜನರು ಸಾಯುತ್ತಿದ್ದಾರೆ, ಜನರ ಜೀವನದ ಜತೆ ಆಟ ಆಡಬೇಡಿ. ಇದನ್ನು ಸರಿಪಡಿಸಬೇಕಾಗಿರೋದು ಹೋರಾಟಗಾರರ, ಸಂಘಟನೆಗಳ ಕರ್ತವ್ಯ ಎಂದು ತಿಳಿಸಿದರು.