janadhvani

Kannada Online News Paper

ಅನಿಯಮಿತ ಬೆಲೆ ಏರಿಕೆ ಖಂಡಿಸಿ ಮತ್ತು ಈಶ್ವರಪ್ಪರನ್ನು ಬಂಧಿಸುವಂತೆ ಒತ್ತಾಯಿಸಿ ಎಸ್.ಡಿ. ಪಿ.ಐ ಪ್ರತಿಭಟನೆ

ತೊಕ್ಕೊಟ್ಟು ( ಏ 14 ) : ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆಯ ವಸ್ತುಗಳ ಅನಿಯಮಿತ ಬೆಲೆಯೇರಿಕೆಯನ್ನು ಖಂಡಿಸಿ ಮತ್ತು ಕಾಮಗಾರಿಯಲ್ಲಿ 40% ಕಮೀಷನ್ ಕೇಳಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಕಾರಣರಾದ ಈಶ್ವರಪ್ಪನನ್ನು ವಜಾಗೊಳಿಸಿ ಕೊಲೆ ಪ್ರಕರಣದಲ್ಲಿ ಬಂಧಿಸುವಂತೆ ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಕಾರ್ಯಕರ್ತರು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯ ನೇತೃತ್ವವನ್ನು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಝಾಕಿರ್ ಉಳ್ಳಾಲ್ ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದ ಜನ ಬದುಕುವುದು ದುಸ್ತರವಾಗಿದೆ. ಸರ್ಕಾರ ಕೂಡಲೇ ತೈಲ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ದ.ಕ ಜಿಲ್ಲಾ ಸಮಿತಿಯ ಸದಸ್ಯರಾದ ಅಶ್ರಫ್ ಕೆಸಿ ರೋಡ್ ಮಾತನಾಡಿ ಸಂತೋಷ್ ಪಾಟೀಲ್ ಸಾವಿನ ಹಿಂದೆ ಈಶ್ವರಪ್ಪ ಅವರ ಕೈವಾಡವಿದೆ. ಹರ್ಷ ಕೊಲೆಯ ಸಂದರ್ಭದಲ್ಲಿ ಕೊಲೆ ಆರೋಪಿಗಳಿಗೆ ಧರ್ಮದ ಪಟ್ಟ ಕಟ್ಟಿ ಮುಸ್ಲಿಂ ಗೂಂಡಾಗಳ ಕೃತ್ಯ ಎಂದಿದ್ದರು ಈ ಈಶ್ವರಪ್ಪ. ಈಗ ಸಂತೋಷ್ ಪಾಟೀಲ್ ಸಾವಿನ ಹಿಂದೆ ಇವರ ಹೆಸರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಈ ಸಂಘಿ ಗೂಂಡಾ ಈಶ್ವರಪ್ಪನ ಪಾತ್ರದ ತನಿಖೆಗಾಗಿ ಕೂಡಲೇ ಇವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಬಂಧಿಸಿ ಜೈಲಿಗೆ ಅಟ್ಟಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಎ. ಆರ್ ಅಬ್ಬಾಸ್, ಕ್ಷೇತ್ರ ಸಮಿತಿಯ ಸದಸ್ಯರಾದ ಅಬ್ಬಾಸ್ ಕಿನ್ಯಾ, ನೌಷಾದ್ ಕಲ್ಕಟ್ಟ, ಅಶ್ರಫ್ ಮಂಚಿ, ಲತೀಫ್ ಕೋಡಿಜಾಲ್, ನಗರ ಸಮಿತಿ ಉಪಾಧ್ಯಕ್ಷ ಇಮ್ತಿಯಾಝ್ ಕೋಟೇಪುರ, ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್, ಮೊಯ್ದಿನ್ ಅಜ್ಜಿನಡ್ಕ, ಕೌನ್ಸಿಲರ್ ರಮೀಝ್, ಅಸ್ಗರ್ ಅಲಿ, ರವೂಫ್, ಇಕ್ಬಾಲ್, ನಿಝಾಮ್ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಾಹಿದ್ ಮಲಾರ್ ಸ್ವಾಗತಿಸಿದರೆ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಬಳ ಧನ್ಯವಾದ ಸಮರ್ಪಿಸಿದರು.