janadhvani

Kannada Online News Paper

ಶಾಲಾ ಮಕ್ಕಳ ನಡುವೆ ಸಮಸ್ಯೆ ಸೃಷ್ಟಿಯಾಗಿದೆ, ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ- ಯುಟಿ ಖಾದರ್

ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಮೊದಲು ಸಾಮರಸ್ಯ ಸಮಾವೇಶ ಪ್ರತಿ ಜಿಲ್ಲೆಯಲ್ಲಿ ಮಾಡಬೇಕು

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವುದಕ್ಕೂ ಮುನ್ನ ಸಾಮರಸ್ಯ ಸಮಾವೇಶ ಮಾಡಬೇಕಾದ ಅಗತ್ಯ ಇದೆ ಎಂದು ಪ್ರತಿ ಪಕ್ಷದ ಉಪ ನಾಯಕ ಯು. ಟಿ. ಖಾದರ್ ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿಷದ ವಾತಾವರಣದಲ್ಲಿ ವಿತ್ತೀಯ ಬೆಳವಣಿಗೆ ಸಾಧ್ಯವಿಲ್ಲ. ರಕ್ತದ ಮಡುವಿನಲ್ಲಿ ಆರ್ಥಿಕತೆ ಸಾಧ್ಯವಿಲ್ಲ. ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಮೊದಲು ಸಾಮರಸ್ಯ ಸಮಾವೇಶ ಪ್ರತಿ ಜಿಲ್ಲೆಯಲ್ಲಿ ಮಾಡಬೇಕು ಎಂದು ಆಗ್ರಹಿಸಿದರು.
ಸದ್ಯದ ವಾತಾವರಣದಲ್ಲಿ ಶಾಲಾ ಕಾಲೇಜಿಗೆ ಯಾರು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ಕಳಿಸ್ತಾರೆ? ಕರ್ನಾಟಕವನ್ನು ಶೈಕ್ಷಣಿಕ ಕಾಶಿ ಎಂದು ಕರೆಯುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ ಯಾರು ಶಿಕ್ಷಣ ಕಲಿಯಲು ಬರುತ್ತಾರೆ? ಎಂದು ಪ್ರಶ್ನಿಸಿದರು.

ಶಾಲಾ ಮಕ್ಕಳ ನಡುವೆ ಸಮಸ್ಯೆ ಸೃಷ್ಟಿಯಾಗಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರಿಗೆ ಸಾಧ್ಯವಾಗುತ್ತಿಲ್ಲ. ಎಲ್ಲವನ್ನೂ ನ್ಯಾಯಾಲಯಕ್ಕೆ ಬಿಡುವ ಬದಲು ಸರ್ಕಾರ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು. ಸರ್ಕಾರ ಇದಕ್ಕೆ ಏಕೆ ಆಸಕ್ತಿ ವಹಿಸುತ್ತಿಲ್ಲ? ಕೋಮುವಾದದ ಪರಿಸ್ಥಿತಿಯನ್ನು ಮೌನವಾಗಿ ಆನಂದಿಸುವ ಕೆಲಸ ಏಕೆ ಮಾಡುತ್ತಿದೆ ಎಂದು ಖಾದರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಹಿಜಾಬ್ ವಿವಾದವನ್ನು ನ್ಯಾಯಾಲಯಕ್ಕೆ ಬಿಡುವ ಬದಲು ಸರ್ಕಾರ ಮುಂದೆ ನಿಂತು ಬಗೆಹರಿಸಬೇಕು. ಶಾಲಾ ಕಾಲೇಜಿನಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಸರ್ಕಾರದ್ದು. ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿ ತಳಮಟ್ಟದಲ್ಲಿ ಸಮಸ್ಯೆಗೆ ಕಾರಣವಾಗುತ್ತಿದೆ. ಇದನ್ನು ಸರ್ಕಾರ ನಿಭಾಯಿಸುವ ಕೆಲಸ ಮಾಡಬೇಕು.ನ್ಯಾಯಾಲಯ, ಶಾಲಾ ಆಡಳಿತ ಮಂಡಳಿ ತೀರ್ಮಾನ ಮಾಡಲಿ ಎಂದಿದೆ. ಆದರೆ ಶಾಲಾ ಆಡಳಿತ ಮಂಡಳಿ ತೀರ್ಮಾನ ಮಾಡಿದರೂ ಶಿಕ್ಷಣ ಇಲಾಖೆಯ ಜಂಟಿ ಆಯುಕ್ತರು ಮಾನ್ಯತೆ ಕೊಡುತ್ತಿಲ್ಲ ಎಂದು ಖಾದರ್ ಹೇಳಿದರು.

ವಿದ್ಯಾರ್ಥಿಗಳ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡಬೇಕು. ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ಕೊಡಬೇಕು. ಆ ಮಕ್ಕಳ ಜಾಗದಲ್ಲಿ ನಮ್ಮ ಮಕ್ಕಳೆಂದು ಭಾವಿಸಿ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಮನವಿ ಮಾಡಿದರು.