janadhvani

Kannada Online News Paper

ಹಿಜಾಬ್ ಧರಿಸುವಿಕೆ ಅಶಿಸ್ತು- ಶಿಕ್ಷಣ ಸಚಿವರ ಹೇಳಿಕೆಗೆ ದ.ಕ. ಮುಸ್ಲಿಮ್ ಒಕ್ಕೂಟ ಖಂಡನೆ

ಅಸಾಂವಿಧಾನಿಕ ಹೇಳಿಕೆ ಮೂಲಕ ಸಚಿವರು ಸಮಾಜದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುವ ಕೃತ್ಯವವನ್ನು ಉತ್ತೇಜಿಸುತ್ತಿದ್ದಾರೆ.

ಮಂಗಳೂರು :ಉಡುಪಿ ಸರ್ಕಾರಿ ಬಾಲಕಿಯರ ಶಿಕ್ಷಣ ಸಂಸ್ಥೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಶಿರವಸ್ತ್ರ ಹಿಜಾಬ್, ಸ್ಕಾರ್ಫ್ ಧರಿಸಿ ತರಗತಿಯಲ್ಲಿ ಪ್ರವೇಶಿಸುವುದಕ್ಕೆ ಸಂಸ್ಥೆಯ ಪ್ರಾಂಶುಪಾಲರು ತಡೆ ಒಡ್ಡಿ ಕಳೆದ 3 ವಾರಗಳಿಂದ ಸಂತ್ರಸ್ತ ವಿಧ್ಯಾರ್ಥಿಗಳು ಶಾಲೆಯ ಹೊರಗಡೆ ಇದ್ದು, ತರಗತಿ ಪ್ರವೇಶ ನಿರ್ಭಂದ ಗೊಳಿಸಲಾಗಿದೆ.

ವಿದ್ಯಾರ್ಥಿನಿಯರು ಅವರ ಧಾರ್ಮಿಕ ಸಂಕೇತವಾದ ದಿನವಹಿ ಹಿಜಾಬ್ ಧರಿಸುವುದು ಅವರ ಸಂವಿಧಾನ ಬದ್ದ ಹಕ್ಕು ಆಗಿರುತ್ತದೆ. ಯಾವುದೇ ವ್ಯಕ್ತಿಯ ವಸ್ತ್ರ ಧಾರಣೆ ಅದು ವೈಯುಕ್ತಿಕ ಆಯ್ಕೆ ಯಾಗಿರುತ್ತದೆ. ಅದನ್ನು ನಿರ್ಬಂಧಿಸುವ ಅಧಿಕಾರ ಯಾರಿಗೂ ಇಲ್ಲ. ಸರಕಾರಿ ಶಾಲಾ ವಿದ್ಯಾರ್ಥಿಗಳು ಸರಕಾರದ ಶೈಕ್ಷಣಿಕ ಸವಲತ್ತಿನ ಪ್ರಯೋಜನಾರ್ಥಿಗಳಾಗಿದ್ದಾರೆ.ಇಲ್ಲಿ ಶಾಲಾ ಮುಖ್ಯಸ್ಥರು ತನ್ನ ಉದ್ಧಟತನದಿಂದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿದ್ದಾರೆ.

ಈ ಮಧ್ಯೆ ಹಿಜಾಬ್ ಧರಿಸುವಿಕೆ ಅಶಿಸ್ತು ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ರವರು ಹೇಳಿಕೆ ನೀಡಿರುತ್ತಾರೆ. ಯಾವುದೇ ಓರ್ವ ಪ್ರಜೆಯ ವಸ್ತ್ರ ಧಾರಣೆ ಅವರ ಸಾಂವಿಧಾನಿಕ ಹಕ್ಕು ಮತ್ತು ಅದನ್ನು ಧರಿಸಲು ಈ ದೇಶದ ಸಂವಿಧಾನ ಮುಕ್ತ ಸ್ವಾತಂತ್ರ್ಯ ನೀಡಿದೆ. ಆ ಕಾರಣಕ್ಕೆ ತಡೆ ಒಡ್ಡುವಂತಿಲ್ಲ. ಶಿಕ್ಷಣ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು ಅವರ ಧಾರ್ಮಿಕ ಪೋಷಾಕು ಧರಿಸಿ ವಿದ್ಯಾರ್ಜನೆ ಮಾಡುವುದರಲ್ಲಿ ಪ್ರಾದ್ಯಾಪಕ ವೃಂದಕ್ಕೆ ಏನು ಸಮಸ್ಯೆ.

ಸಚಿವರಾದ ಬೀ.ಸಿ. ನಾಗೇಶ್ ರವರು ಅಸಾಂವಿಧಾನಿಕ ಹೇಳಿಕೆ ನೀಡಿರುತ್ತಾರೆ. ಈ ಹೇಳಿಕೆಯನ್ನು ಪ್ರಬಲವಾಗಿ ಖಂಡಿಸುತ್ತೇವೆ. ಶಿಕ್ಷಣ ಸಚಿವರು ತಕ್ಷಣ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸೇರ್ಪಡೆ ಗೊಳಿಸಬೇಕು ಮತ್ತು ಇಂತಹ ಅಸಾಂವಿಧಾನಿಕ ಹೇಳಿಕೆ ಮೂಲಕ ಸಚಿವರು ಸಮಾಜದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುವ ಕೃತ್ಯವವನ್ನು ಉತ್ತೇಜಿಸುತ್ತಿದ್ದಾರೆ. ಸಚಿವರು ಓರ್ವ ಜವಾಬ್ದಾರಿ ಸ್ಥಾನದಲ್ಲಿ ಇದ್ದು,ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ವಂಚಿಸುವ ಹೇಳಿಕೆ ನೀಡಿರುವುದು ಖಂಡನಾರ್ಹ.

ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.