janadhvani

Kannada Online News Paper

ಮಲ್ಲಪುರಂ ಜನರಿಗೆ ಚಿರಋಣಿ- ಏರ್ ಇಂಡಿಯಾ ಎಕ್ಸ್ ಪ್ರೆಸ್

ನವದೆಹಲಿ: ಕೇರಳದ ಕೋಯಿಕ್ಕೋಡ್ ಕರಿಪೂರ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಮಲ್ಲಪುರಂ ಜನರು ತೋರಿದ ಕರುಣೆ ಹಾಗೂ ಮಾನವೀಯತೆಯನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಸ್ಮರಿಸಿದೆ. ಈ ವಿಮಾನ ಅಪಘಾತ ಸಂದರ್ಭದಲ್ಲಿ ಇಬ್ಬರು ಪೈಲಟ್ ಗಳು ಸೇರಿದಂತೆ 18 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.

ಅನಿಶ್ಚಿತ ಘಟನೆಯ ಸಮಯದಲ್ಲಿ ಕರುಣೆ ಹಾಗೂ ಮಾನವೀಯತೆಯನ್ನು ತೋರಿರುವ ಮಲ್ಲಪುರಂ ಜನರಿಗೆ  ಚಿರಋಣಿಯಾಗಿರುವುದಾಗಿ ಎರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಟ್ವೀಟ್ ಮಾಡಿದೆ.

ಇದು ಕೇವಲ ಧೈರ್ಯವಲ್ಲ, ಮಾನವೀಯತೆ ಮೂಲಕ ಜನರ ಜೀವವನ್ನು ಉಳಿಸಲಾಗಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಲವು ಜನರ ಪ್ರಾಣ ಉಳಿಸಿರುವ ಮಲ್ಲಪುರಂ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ತಿಳಿಸಿದೆ.

ವಿಮಾನ ದುರಂತ ಸಂದರ್ಭದಲ್ಲಿ ಕೊರೋನಾ ಆತಂಕವನ್ನೂ ಲೆಕ್ಕಿಸದೆ, ಆಂಬುಲೆನ್ಸ್ , ಪೊಲೀಸ್ ವಾಹನಗಳಿಗೆ ಕಾಯದೇ ತಮ್ಮದೇ ವಾಹನಗಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಪ್ರಾಣ ಸಂರಕ್ಷಿಸಲು ಹರಸಾಹಸ ಪಟ್ಟ ಮಲಪ್ಪುರಂ ನಿವಾಸಿಗಳ ಮಾನವೀಯತೆ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.ಜಾತಿ,ಧರ್ಮ ಬೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ ಮಲಪ್ಪುರಂ ನಿವಾಸಿಗಳು ಇಡೀ ದೇಶಕ್ಕೇ ಮಾದರೀ ಯೋಗ್ಯರಾಗಿದ್ದಾರೆ.