janadhvani

Kannada Online News Paper

ಸಿದ್ದರಾಮಯ್ಯರಿಗೆ ಕೊರೊನಾ- ಅವಹೇಳನಕಾರಿ ಪೋಸ್ಟ್ ವಿರುದ್ಧ ದೂರು

ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಫೇಸ್ ಬುಕ್‍ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಇಬ್ಬರ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಖಾಸಗಿ ನ್ಯೂಸ್ ಚಾನೆಲ್‍ನ ಫೇಸ್‍ಬುಕ್ ಪೆಜ್‍ನಲ್ಲಿ ಪ್ರಕಟವಾಗಿತ್ತು.

ಅದಕ್ಕೆ ಕಾಮೆಂಟ್ ಮಾಡುವ ವೇಳೆ ಆನಂದ ಕುಮಾರ್ ಮತ್ತು ಮಂಜು ಮಂಜು ಎಂಬಿಬ್ಬರು ನಿಂದನಾತ್ಮಕ ಆಭಿಪ್ರಾಯ ವ್ಯಕ್ತ ಪಡಿಸಿದ್ದರು ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ಸಚೇತಕ ನಾರಾಯಣ ಸ್ವಾಮಿ ಅವರು ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಿದ್ದರಾಮಯ್ಯ ಅವರ ಬಗ್ಗೆ ಆರೋಪಿಗಳಿಬ್ಬರು ಹಾಕಿರುವ ಕಾಮೆಂಟ್‍ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳಿವೆ. ಹಾಗಾಗಿ ದೂರು ನೀಡಿರುವುದಾಗಿ ವಕೀಲ ಹಾಗೂ ಕಾಂಗ್ರೆಸ್ ಮುಖಂಡರಾದ ಸೂರ್ಯ ಮುಕುಂದ ರಾಜ್ ತಿಳಿಸಿದ್ದಾರೆ.