janadhvani

Kannada Online News Paper

ಡಾ.ಗಿರಿಧರ್ ಕಜೆಯವರ ಕೊರೋನಾ ಔಷಧಿ ಯಶಸ್ವಿ-ಸರ್ಕಾರದ ಅಂಗೀಕಾರ ನಿರೀಕ್ಷೆ

ಬೆಂಗಳೂರು: ಮಾರಕ ಕೊರೊನಾ ವೈರಸ್ ಪಿಡುಗಿಗೆ ಡಾ. ಗಿರಿಧರ್ ಕಜೆಯವರು ಕಂಡು ಹಿಡಿದಿರುವ ಔಷಧ ಪ್ರಯೋಗ ಯಶಸ್ವಿಯನ್ನು ಕಂಡಿದೆ. ಆಯುರ್ವೇದದ ಮೂಲಕ ಕೊರೊನಾ ಸೋಂಕಿತರನ್ನು ಗುಣಪಡಿಸಿದ ಡಾ.ಗಿರಿಧರ ಕಜೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 23 ವರ್ಷದಿಂದ 65 ವರ್ಷದವರೆಗಿನ ಕೊರೊನಾ ಸೋಂಕಿತರಿಗೆ ಈ ಆಯುರ್ವೇದ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ಪಡೆದ ಸೋಂಕಿತರು ಗುಣಮುಖರಾಗಿದ್ದಾರೆ.

ಹೃದ್ರೋಗ, ಕ್ಷಯ ರೋಗ, ಮಧುಮೇಹ ಇದ್ದ ರೋಗಿಗಳು ಈ ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಅತಿ ಕಡಿಮೆ ವೆಚ್ಚದ ಚಿಕಿತ್ಸೆ ಇದಾಗಿದ್ದು, ಡಾ. ಗಿರಿಧರ್ ಕಜೆಯವರ ಈ ಪ್ರಯೋಗ ಯಶಸ್ವಿಯನ್ನು ಕಂಡಿದೆ. ಬೇರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರು ಸೇರಿ 10 ಜನ ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್‌ ಟ್ರಯಲ್ಸ್‌ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧೀನ ಸಂಸ್ಥೆಯಾದ ಕ್ಲಿನಿಕಲಿ ಟ್ರಯಲ್‌ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ನೀಡಿತ್ತು. ಜೂ.7 ರಿಂದ 25ರವರೆಗೂ ಈ ಪ್ರಯೋಗ ನಡೆದಿತ್ತು.

ಆಯುರ್ವೇದದ ಈ ಔಷಧಿಗೆ 90ರೂ. ನಿಂದ 180 ರೂ. ತಗುಲುತ್ತದೆ. ಇನ್ನು ಮುಂದಿನ ಹಂತದಲ್ಲಿ ಹೆಚ್ಚಿನ ಸೋಂಕಿತರಿಗೆ ಮತ್ತು ಮುಂಜಾಗ್ರತಾ ದೃಷ್ಟಿಯಿಂದ ಸೋಂಕಿತ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಈ ಔಷಧ ನೀಡಬಹುದು. ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಡಾ.ಗಿರಿಧರ ಕಜೆ ತಿಳಿಸಿದ್ದಾರೆ.

ಈ ಆಯುರ್ವೇದ ಚಿಕಿತ್ಸೆ ವಿಧಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜೀವ್‌ ಗಾಂಧಿ ಆರೋಗ್ಯ ವಿವಿ ಕುಲಪತಿಗೆ ವರದಿ ನೀಡಲು ತಿಳಿಸಲಾಗಿದೆ.