janadhvani

Kannada Online News Paper

ಆಗಸ್ಟ್ 15 ರಿಂದ ಶಾಲಾ-ಕಾಲೇಜುಗಳು ಪುನರಾರಂಭ- ಮಾನವ ಸಂಪನ್ಮೂಲ ಸಚಿವ

ನವದೆಹಲಿ:ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ವಾರಗಳ ಗೊಂದಲದ ನಂತರ, ಆಗಸ್ಟ್ 2020 ರ ನಂತರ ಶಾಲೆಗಳು ಮತ್ತು ಕಾಲೇಜುಗಳನ್ನು ಮತ್ತೆ ತೆರೆಯಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ.

ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ನಡುವಲ್ಲೇ ಶಾಲೆಗಳ ಆರಂಭದ ಕುರಿತು ಗೊಂದಲಗಳು ಏರ್ಪಟ್ಟಿದೆ. ಈ ನಡುವಲ್ಲೇ ಶಾಲೆ, ಕಾಲೇಜುಗಳು ಅಗಸ್ಟ್ ಬಳಿಕಷ್ಟೇ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

ಶಾಲೆ ಕಾಲೇಜುಗಳು ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳುತ್ತಿದ್ದು, ಜುಲೈನಿಂದ ಶಾಲೆ ಕಾಲೇಜುಗಳು ಶೇಕಡಾ 30% ಹಾಜರಾತಿಯೊಂದಿಗೆ ಬೆಳಗ್ಗೆ ಮತ್ತು ಸಂಜೆಯ ಕ್ಲಾಸ್‍ಗಳು ಆರಂಭವಾಗಲಿದೆ. ಅಲ್ಲದೇ ಹಸಿರು ಕಿತ್ತಳೆ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಶುರುವಾಗಲಿದೆ. ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಶಾಲೆ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಸದ್ಯ ಅನುಮತಿ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

ಅಲ್ಲದೇ ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಆಗಸ್ಟ್ ಬಳಿಕವೇ ಶಾಲೆ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ಸಿಬಿಎಸ್‍ಸಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್‍ಎಸ್‍ಎಲ್‍ಸಿ ಪಿಯುಸಿ ಹಾಗೂ ಡಿಪ್ಲೋಮಾ, ಪದವಿ ಪರೀಕ್ಷೆಗಳು ಬಾಕಿ ಉಳಿದುಕೊಂಡಿದ್ದು ಆಗಸ್ಟ್ ಅಂತ್ಯದ ವೇಳೆಗೆ ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಪ್ರಯತ್ನ ಮಾಡಲಿದ್ದೇವೆ. ಆಗಸ್ಟ್ ಬಳಿಕ ಪರಿಸ್ಥಿತಿ ಅನುಸರಿಸಿ ಶಾಲೆ ಕಾಲೇಜುಗಳನ್ನು ಆರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.