janadhvani

Kannada Online News Paper

ಪರಿಹಾರ ಬೇಡ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ- ಸಿಎಂ ರೊಂದಿಗೆ ಕಣ್ಣೀರಿಟ್ಟ ನೌಶೀನ್ ತಾಯಿ

ಮಂಗಳೂರು ,ಡಿ. 21: ಪೊಲೀಸರ ಗುಂಡಿಗೆ ಬಲಿಯಾದ ನನ್ನ ಮಗನ ಸಾವಿಗೆ ಪರಿಹಾರ ಬೇಡ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಪೋಲೀಸ್ ಗುಂಡೇಟಿನಲ್ಲಿ ಮೃತಪಟ್ಟ ನೌಶೀನ್ ಅವರ ತಾಯಿ ಒತ್ತಾಯಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ಬೆರಳೆಣಿಕೆಯ ಮಂದಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ವೇಳೆ ಹಿಂಸೆಗೆ ಕುಮ್ಮಕ್ಕು ನೀಡಿದ ಪೋಲೀಸರು ಗುಂಡು ಹಾರಿಸಿ ವಿಕೃತ ಆನಂದ ಪಡೆದಿದ್ದರು. ಇವರ ಮೃಗೀಯ ವರ್ತನೆಗೆ ನಗರದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನೌಶೀನ್ ಎಂಬ ಯುವಕ ಹಾಗೂ ಬಂದರಿನ ಜಲೀಲ್ ಎಂಬವರು ಮೃತಪಟ್ಟಿದ್ದರು. ನಿನ್ನೆ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು, ಮೃತರ ಕುಟುಂಬಸ್ಥರನ್ನು ಸಿಎಂ ಯಡಿಯೂರಪ್ಪ ಇಂದು ಮಂಗಳೂರಿಗೆ ತೆರಳಿ ಭೇಟಿ ಮಾಡಿ ಸಮಾಧಾನಪಡಿಸಿದರು.

ಈ ವೇಳೆ ಪೊಲೀಸರು ನನ್ನ ಮಗನನ್ನು ಕೊಂದರು ಎಂದು ಯಡಿಯೂರಪ್ಪ ಅವರ ಬಳಿ ಕಣ್ಣೀರಿಟ್ಟ ಮೃತ ನೌಷೀನ್ ಅವರ ತಾಯಿ ಮುಮ್ತಾಜ್, “ನನ್ನ ಮಗ ಬಂದರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ, ಪ್ರತಿದಿನ ಅದೇ ದಾರಿಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದ. ಆದರೆ, ಮೊನ್ನೆ ಪೊಲೀಸರು ನನ್ನ ಮಗನನ್ನು ಕೊಂದೆ ಬಿಟ್ಟರು. ಇದೆಂಥಾ ರಾಜಕೀಯ ಎಂದು ಕಣ್ಣೀರಿಟ್ಟ ಅವರು, ನನ್ನ ಮಗನ ಸಾವಿಗೆ ಪರಿಹಾರವೇನೂ ಬೇಡ ದಯವಿಟ್ಟು ನನ್ನ ಮಗನನ್ನು ಕೊಂದವರಿಗೆ ತಕ್ಕ ಶಿಕ್ಷೆ ನೀಡಿ” ಎಂದು ಒತ್ತಾಯಿಸಿದ್ದಾರೆ.