janadhvani

Kannada Online News Paper

ಮಿಸ್ಟರ್ ಶಾ, ಪೌರತ್ವ ನೀಡುವುದರ ವಿರುದ್ಧವಲ್ಲ ,ಸಂವಿಧಾನ ವಿರೋಧಿ ಕಾಯ್ದೆ ವಿರುದ್ಧವಾಗಿದೆ ಪ್ರತಿಭಟನೆ

ನವದೆಹಲಿ:”ಪೌರತ್ವ (ತಿದ್ದುಪಡಿ) ಕಾಯ್ದೆ-2019″ ಎಂಬ ಒಂದು ವಿಭಾಗವನ್ನು ಬದಿಗಿಟ್ಟು ಉಳಿದವರಿಗೆ ಪೌರತ್ವ ಎಂಬ ಅಸಂವಿಧಾನಿಕ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಆದಾಗ್ಯೂ ಕೂಡ ಗೃಹ ಸಚಿವ ಅಮಿತ್ ಶಾ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ” ರಾಜಕೀಯವಾಗಿ ಈ ಕಾಯ್ದೆಗೆ ಎಷ್ಟೇ ವಿರೋಧ ಎದುರಾಗಲಿ, ಭಾರತೀಯ ಜನತಾ ಪಾರ್ಟಿ ಮಾತ್ರ ಸಹಾಯ ಕೋರಿ ಬಂದ ಎಲ್ಲ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ನೀಡಿಯೇ ತೀರಲಿದೆ” ಎಂಬ ರಾಗ ಎಳೆದಿದ್ದಾರೆ.

ನಿರಾಶ್ರಿತರಿಗೆ ಪೌರತ್ವ ನೀಡುವುದರ ವಿರುದ್ಧ ಪ್ರತಿಭಟನೆ ನಡಿಯುತ್ತಿದೆ ಎಂದು ಬಿಂಬಿಸಲು ಮುಂದಾಗಿರುವ ಮಾನ್ಯ ಗೃಹ ಮಂತ್ರಿಯವರು, ತಿದ್ದುಪಡಿ ಕಾಯ್ದೆಯಲ್ಲಿ ಕೇವಲ ಮುಸ್ಲಿಮ್ ಸಮುದಾಯವನ್ನು ಕೈಬಿಟ್ಟು ಉಳಿದವರಿಗೆ ಪೌರತ್ವ ಎಂಬ ಸಂವಿಧಾನ ವಿರೋಧಿ ನಿಲುವಿನ ವಿರುದ್ಧ ಇಂದು ದೇಶಾದ್ಯಂತ ಹೋರಾಟ ನಡೆಯುತ್ತಿದೆ ಎಂಬುದನ್ನು ತಿರುಚಲು ಹರಸಾಹಸ ಪಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಅವರು “ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ಸಿಗಲಿದ್ದು, ಅವರು ಭಾರತದ ನಾಗರಿಕರಾಗಲಿದ್ದು, ಈ ದೇಶದಲ್ಲಿ ಗೌರವದಿಂದ ಬಾಳಲಿದ್ದಾರೆ. ರಾಜಕೀಯವಾಗಿ ಯಾರು ಬೇಕಾದರೂ ಇದನ್ನು ವಿರೋಧಿಸಿ, ಭಾರತೀಯ ಜನತಾ ಪಕ್ಷ ಪಕ್ಷ ಮಾತ್ರ ಈ ಕಾಯ್ದೆ ಜಾರಿಗೆ ಕಟಿಬದ್ಧವಾಗಿದೆ” ಎಂದಿದ್ದಾರೆ.

ಈ ಕಾಯ್ದೆಯಲ್ಲಿ ಎಲ್ಲಿಯೂ ಕೂಡ ಯಾರ ಪೌರತ್ವವನ್ನೂ ಕೂಡ ಹಿಂಪಡೆಯುವ ಕುರಿತು ಪ್ರಸ್ತಾವನೆ ಇಲ್ಲ ಮತ್ತು ಇದರಲ್ಲಿ ಪೌರತ್ವ ದಯಪಾಲಿಸುವ ಪ್ರಸ್ತಾಪ ಮಾತ್ರ ಇದ್ದು, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತ ಪ್ರವೇಶಿಸಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತಿದೆ ಎಂದು ಶಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಆದರೆ ಪೌರತ್ವ ದಯಪಾಲಿಸುವ ಪ್ರಸ್ತಾಪದಲ್ಲಿ ಮುಸ್ಲಿಮರಿಲ್ಲ ಎಂಬುದನ್ನು ಮರೆತು ಬಿಟ್ಟಿದ್ದಾರೆ.

ನಾನು ಈ ವಿಶ್ವಾಸ ನೀಡಲು ಬಯಸುವೆ:
ಕಾಯ್ದೆಯ ಕುರಿತಂತೆ ಸ್ಪಷ್ಟತೆ ನೀಡಿರುವ ಶಾ ” ಈಗಾಗಲೇ ಈ ದೇಶದ ನಾಗರಿಕರಾಗಿರುವವರು ಭಯಪಡುವ ಅಗತ್ಯವಿಲ್ಲ, ಈ ದೇಶದ ನಾಗರಿಕರಾಗಿರುವ ಓರ್ವ ಮುಸ್ಲಿಂ ವ್ಯಕ್ತಿಗೂ ಕೂಡ ಈ ಕಾಯ್ದೆಯಿಂದ ಅನ್ಯಾಯವಾಗುವುದಿಲ್ಲ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಯಸುತ್ತೇನೆ” ಎಂದಿದ್ದಾರೆ.