janadhvani

Kannada Online News Paper

ಗುರುತಿನ ಸಾಕ್ಷ್ಯಕ್ಕೆ ಆಧಾರ್‌ – ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

ಹೊಸದಿಲ್ಲಿ: ಬ್ಯಾಂಕ್‌ ಖಾತೆ ತೆರೆಯಲು ಹಾಗೂ ಸಿಮ್‌ ಕಾರ್ಡ್‌ ಖರೀದಿ ಸೇರಿದಂತೆ ಇತರೆ ಉದ್ದೇಶಗಳಿಗೆ ಸ್ವಯಂ ಪ್ರೇರಿತವಾಗಿ ಆಧಾರ್‌ ಕಾರ್ಡ್‌ ಅನ್ನು ಗುರುತಿನ ಸಾಕ್ಷ್ಯಕ್ಕೆ ಬಳಸಲು ಅವಕಾಶ ನೀಡುವ ಆಧಾರ್‌ ತಿದ್ದುಪಡಿ ವಿಧೇಯಕದ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡಿದೆ.

ಈ ಹಿಂದೆ ಪಂಚ ಸದಸ್ಯರ ಸಂವಿಧಾನ ಪೀಠವು, ಆಧಾರ್‌ ಕಾಯಿದೆಯ ಸಿಂಧುತ್ವ ಎತ್ತಿಹಿಡಿದಿದ್ದರೂ ಗ್ರಾಹಕರು ಆಧಾರ್‌ ಕಾರ್ಡ್‌ಅನ್ನು ಗುರುತಿನ ಪುರಾವೆಯಾಗಿ ಸ್ವಯಂ ಪ್ರೇರಿತವಾಗಿ ನೀಡಿದ್ದರೂ ಅದರ ಡೇಟಾ ಬಳಸದಂತೆ ಖಾಸಗಿ ಕಂಪನಿಗಳಿಗೆ ನಿರ್ಬಂಧ ವಿಧಿಸಿ ತೀರ್ಪು ನೀಡಿತ್ತು.

ಇದಾದ ನಂತರ ಕೇಂದ್ರ ಸರಕಾರ ಬ್ಯಾಂಕ್‌ ಖಾತೆ, ಮೊಬೈಲ್‌ ಸಿಮ್‌ ಕಾರ್ಡ್‌ ಸಂಪರ್ಕ ಸೇರಿ ಇತರೆ ಉದ್ದೇಶಗಳಿಗೆ ಸ್ವಯಂ ಪ್ರೇರಿತವಾಗಿ ಆಧಾರ್‌ ಅನ್ನು ಐಡಿ ಪ್ರೂಫ್‌ ಆಗಿ ನೀಡಬಹುದೆಂದು ಹೇಳಿ, ಈ ಸಂಬಂಧ ಆಧಾರ್‌ ಕಾಯಿದೆಗೆ ಈ ವರ್ಷ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ನಿವೃತ್ತ ಸೇನಾಧಿಕಾರಿ ಕರ್ನಾಟಕ ಮೂಲದ ಎಸ್‌.ಜಿ.ಒಂಬತ್ಕೆರೆ ಅವರು ಅರ್ಜಿ ಸಲ್ಲಿಸಿದ್ದರು.