janadhvani

Kannada Online News Paper

ಚಿದಂಬರಂ ಬಂಧನ- ಸಿಬಿಐ ನಡೆ ವಿರುದ್ಧ ಮಮತಾ ಬ್ಯಾನರ್ಜಿ ಅಸಮಾಧಾನ

ಕೋಲ್ಕತ್ತ: ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಬಂಧನ ವಿಚಾರದಲ್ಲಿ ಸಿಬಿಐ ಅಧಿಕಾರಿಗಳು ನಡೆದುಕೊಂಡ ರೀತಿ ಮತ್ತು ಅವರನ್ನು ಬಂಧಿಸಿರುವ ಕ್ರಮದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು ಕಾನೂನಿನ ವಿಚಾರ ಮಾತನಾಡುತ್ತಿಲ್ಲ, ಕೆಲವು ಸಂದರ್ಭಗಳಲ್ಲಿ ತನಿಖಾಧಿಕಾರಿಗಳ ನಡೆ ಸರಿಯಾಗಿರುವುದಿಲ್ಲ ಎಂದಿದ್ದಾರೆ. ಚಿದಂಬರಂ ಹಿರಿಯ ನಾಯಕರು ಹಾಗೇ ದೇಶದ ಹಣಕಾಸು ಸಚಿವರು ಮತ್ತು ಗೃಹಸಚಿವರಾಗಿದ್ದರು. ಅವರ ವಿಚಾರದಲ್ಲಿ ತನಿಖಾಧಿಕಾರಿಗಳು ನಡೆದಕೊಂಡು ರೀತಿ ಸರಿಯಲ್ಲ ಎಂದು ಹೇಳಿದ್ದಾರೆ.

ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆಯ ಹಿಂಬಾಗಿಲಿನಿಂದ ಪ್ರವೇಶ ಮಾಡಿದ್ದು ಹಾಗೂ ಮನೆಯ ಕಾಂಪೌಂಡ್ ಗೋಡೆಗಳನ್ನು ಹತ್ತಿ ಮನೆಯೊಳಗೆ ಪ್ರವೇಶ ಮಾಡಿದ್ದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರದಲ್ಲಿ ಪಿ.ಚಿದಂಬರಂ ವಿದೇಶಿ ಕಂಪನಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪವಿದೆ.