janadhvani

Kannada Online News Paper

ಜಾನುವಾರುಗಳ ಕಳ್ಳತನ,ಅಕ್ರಮ ಸಾಗಾಟ ಧರ್ಮ ಸಮ್ಮತವಲ್ಲ- ಉಡುಪಿ ಖಾಝಿ

ಉಡುಪಿ, ಜೂ.8: ಇಸ್ಲಾಮ್ ಧರ್ಮದಲ್ಲಿ ಅಕ್ರಮ ಹಾಗೂ ಕಳ್ಳತನಕ್ಕೆ ಅವಕಾಶವಿಲ್ಲ. ಆದುದರಿಂದ ಯಾವುದೇ ಪ್ರಾಣಿಗಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಿಸಿ, ಹತ್ಯೆ ಮಾಡುವುದು ಧರ್ಮ ವಿರೋಧಿಯಾಗಿದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಲ್‌ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ತಿಳಿಸಿದ್ದಾರೆ.

ಒಂದು ಧರ್ಮದವರು ದನವನ್ನು ಪೂಜನೀಯವಾಗಿ ಕಾಣುತ್ತಿದ್ದರೆ, ಇನ್ನೊಂದು ಧರ್ಮದವರು ಅದನ್ನು ಸೇವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಧರ್ಮದವರ ಭಾವನೆಗೆ ಧಕ್ಕೆ ಬಾರದಂತೆ ಗೌರವದಿಂದ ನಾವು ನಡೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸಾಗಾಟ ಮಾಡುವಾಗ ಜಾನುವಾರುಗಳಿಗೆ ಚಿತ್ರಹಿಂಸೆ ನೀಡಬಾರದು. ಕಳವುಗೈದ ದನ, ಕರುಗಳನ್ನು ವಧೆ ಮಾಡಬಾರದು. ಅಂತಹ ಜಾನುವಾರುಗಳ ಮಾಂಸವನ್ನು ಬೇರೆಯವರಿಗೆ ತಿನ್ನಿಸಬಾರದು ಅಂತಹಾ ಮಾಂಸ ಸೇವನೆ ನಿಷಿದ್ಧವಾಗಿದೆ, ಹಲಾಲ್ ರೂಪದಲ್ಲಿರುವ ಮಾಂಸವನ್ನು ಮಾತ್ರ ತಿನ್ನಲು ಇಸ್ಲಾಮ್ ನಲ್ಲಿ ಅವಕಾಶವಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.