janadhvani

Kannada Online News Paper

ಟ್ವಿಟರ್‌ನಲ್ಲಿ ಹಿಂದೂಗಳ ಸ್ವಸ್ತಿಕ್‌ ಚಿಹ್ನೆಯನ್ನು ಅಟ್ಟಾಡಿಸುವ ಚಿತ್ರ- ಕೇಜ್ರಿವಾಲ್‌ ವಿರುದ್ಧ ದೂರು

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸುಪ್ರೀಂಕೋರ್ಟ್ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ( ಮಾರ್ಚ್ 20, 2019) ರಂದು ಅರವಿಂದ್ ಕೇಜ್ರಿವಾಲ್‌ ಮಾಡಿರುವ ಟ್ವೀಟ್‌ವೊಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ದಿಲ್ಲಿ ಪೊಲೀಸ್‌ ಕಮೀಷನರ್‌ ಅಮೂಲ್ಯ ಪಟ್ನಾಯಕ್‌ಗೆ ದೂರು ನೀಡಿದ್ದಾರೆ. ಪೊರಕೆ ( ಎಎಪಿ ಚಿಹ್ನೆ ) ಹಿಂದೂಗಳ ಸ್ವಸ್ತಿಕ್‌ ಚಿಹ್ನೆಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ಫೋಟೋವೊಂದನ್ನು ಅರವಿಂದ್ ಕೇಜ್ರಿವಾಲ್‌ ತಮ್ಮ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದರು.

ಸ್ವಸ್ತಿಕ್‌ ಚಿಹ್ನೆ ಹಿಂದೂಗಳ ಪವಿತ್ರ ಸಂಕೇತವಾಗಿದ್ದು, ಇದನ್ನು ಹಲವು ಹಿಂದೂಗಳು ಪೂಜೆ ಮಾಡುತ್ತಾರೆ. ಅಲ್ಲದೆ, ವಿವಿಧ ದಾರ್ಮಿಕ ಸಂಘಟನೆಗಳ ನಡುವೆ ಸಾಮರಸ್ಯ ಇಲ್ಲದಿರುವಂತೆ ಮಾಡುವುದು, ದ್ವೇಷ ಹಾಗೂ ಕೆಟ್ಟ ಭಾವನೆಯನ್ನು ಸೃಷ್ಟಿ ಮಾಡಲು ಈ ರೀತಿ ಟ್ವೀಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ ಎಂದು ಸುಪ್ರೀಂಕೋರ್ಟ್ ವಕೀಲ ಅಲಖ್‌ ಅಲೋಕ್ ಶ್ರೀವಾಸ್ತವ ಆರೋಪಿಸಿದ್ದಾರೆ.

ಇನ್ನು, ”ಕೇಜ್ರಿವಾಲ್‌ ವಿರುದ್ಧ ಐಪಿಸಿಯ ಹಲವು ಸೆಕ್ಷನ್‌ಗಳ ಅನುಸಾರ ಎಫ್‌ಐಆರ್ ದಾಖಲಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ಶ್ರೀವಾಸ್ತವ ದೂರಿನಲ್ಲಿ ತಿಳಿಸಿದ್ದಾರೆ.