janadhvani

Kannada Online News Paper

ಅಭಿನಂದನ್ ಬಿಡುಗಡೆ: ಪಾಕ್ ಪ್ರಧಾನಿಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರಸ್ತಾವನೆ

ಇಸ್ಲಾಮಾಬಾದ್: ಪಾಕಿಸ್ತಾನ ಸೈನ್ಯ ಬಂಧಿಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶಾಂತಿ ಸಂಕೇತವಾಗಿ ಬಿಡುಗಡೆ ಮಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಅಲ್ಲಿನ ನಾಗರಿಕರು ಒತ್ತಾಯ ಮಾಡುತ್ತಿರುವುದಲ್ಲದೆ, ಶನಿವಾರ ಸಂಸತ್ತಿನಲ್ಲೂ ನಿರ್ಣಯ ಮಂಡಿಸಲಾಯಿತು.

ಮಾಹಿತಿ ಸಚಿವ ಫವದ್ ಔಧರಿ ಶನಿವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನ ಮಾಡಿ ಶಾಂತಿ ಸ್ಥಾಪನೆಗಾಗಿ ಇಮ್ರಾನ್ ಖಾನ್ ಭಾರತೀಯ ವಿಂಗ್ ಕಮಾಂಡರ್ನನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಸೋಮವಾರ ಪಾಕ್ ಸಂಸತ್ತಿನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಪ್ರಸ್ತಾವನೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.