janadhvani

Kannada Online News Paper

ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ಧ್ವನಿ ವರ್ಧಕಗಳನ್ನು ಹಾಕುತ್ತಾರೆ, ಯಾರಿಗೆ ತೊಂದರೆ ಆಗಿದೆ?- ಸಿದ್ಧರಾಮಯ್ಯ 

ಚುನಾವಣಾ ವರ್ಷ ಎಂದು ಈ ರೀತಿ ಬೇಕಂತಲೇ ಕ್ಯಾತೆ ತೆಗೆಯುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಇವೆಲ್ಲ ಸಮಾಜದ ಶಾಂತಿ, ಸಾಮರಸ್ಯ ಹಾಳುಮಾಡುವ ಪ್ರಯತ್ನಗಳು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಬೆಂಗಳೂರು: ಏಪ್ರಿಲ್ 05:ದೇವಸ್ಥಾನ, ಮಸೀದಿ, ಚರ್ಚು ಹೀಗೆ ಎಲ್ಲಾ ಕಡೆ ಧ್ವನಿ ವರ್ಧಕಗಳನ್ನು ಹಾಕುತ್ತಾರೆ, ಇದರಿಂದ ಯಾರಿಗೆ ತೊಂದರೆ ಆಗಿದೆ? ಚುನಾವಣಾ ವರ್ಷ ಎಂದು ಈ ರೀತಿ ಬೇಕಂತಲೇ ಕ್ಯಾತೆ ತೆಗೆಯುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಇವೆಲ್ಲ ಸಮಾಜದ ಶಾಂತಿ, ಸಾಮರಸ್ಯ ಹಾಳುಮಾಡುವ ಪ್ರಯತ್ನಗಳು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಮಸೀದಿಗಳಲ್ಲಿನ ಧ್ವನಿವರ್ಧಕ ಬಳಕೆಗೆ ವಿರೋಧ ವ್ಯಕ್ತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎಲ್ಲಾ ಬೆಳವಣಿಗೆಗಳು ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ. ಮುಖ್ಯಮಂತ್ರಿಗಳು ಮೌನವಾಗಿರುವುದಲ್ಲ, ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿದ್ದಾರೆ. ಆರ್.ಎಸ್.ಎಸ್ ಮತ್ತು ಭಜರಂಗದಳ ಸರ್ಕಾರಕ್ಕೆ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡುತ್ತಾ? ಇದನ್ನು ಸರ್ಕಾರ ಹತ್ತಿಕ್ಕಬೇಕು, ಸಮಾಜದ ಶಾಂತಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಸೀದಿಗಳಲ್ಲಿನ ಧ್ವನಿವರ್ಧಕ ಬಳಕೆಗೆ ವಿರೋಧ ಹೀಗೆ ಇನ್ನಿತರ ಘಟನೆಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲ್ಲ. ರಾಜ್ಯಕ್ಕೆ ಯಾವ ಬಂಡವಾಳ ಹೂಡಿಕೆದಾರರು ಬರಲ್ಲ, ಉದ್ಯೋಗ ಸೃಷ್ಟಿಯಾಗಲ್ಲ, ನಿರುದ್ಯೋಗ ಸಮಸ್ಯೆ ಹೋಗಲ್ಲ, ರಾಜ್ಯದ ಜಿಡಿಪಿ ಬೆಳವಣಿಗೆಯಾಗಲ್ಲ. ಸಮಾಜದ ಕೋಮು ಸಾಮರಸ್ಯ ಹಾಳುಮಾಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಇದು ನಿಮಗೆ ಮುಂದೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.