ಟೆಹ್ರಾನ್: ಷರತ್ತುಬದ್ಧ ಶಾಂತಿಗೆ ಸಿದ್ಧ ಎಂದು ಇರಾನ್ ಘೋಷಿಸಿದೆ. ತನ್ನ ಹಕ್ಕುಗಳನ್ನು ಅಂಗೀಕರಿಸಬೇಕು ಮತ್ತು ನಷ್ಟ ಪರಿಹಾರ ನೀಡಬೇಕು ಎಂದು ಇರಾನ್ ಒತ್ತಾಯಿಸಿದೆ. ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ನಡೆಸಿದ ಚರ್ಚೆಯಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕದನ ವಿರಾಮದ ಷರತ್ತುಗಳನ್ನು ಮಂಡಿಸಿದ್ದಾರೆ.
ಚರ್ಚೆಗಳು ನಡೆಯುತ್ತಿರುವ ನಡುವೆಯೇ,ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಮತ್ತೆ 9 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್ ನಡೆಸುತ್ತಿರುವ ದಾಳಿಗಳ ವಿರುದ್ಧ ವಿಶ್ವಸಂಸ್ಥೆಯು ನಿರ್ಣಯವನ್ನು ಅಂಗೀಕರಿಸಿದೆ. ದಾಳಿಗಳನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸುವ ಈ ನಿರ್ಣಯವನ್ನು ಸಮಿತಿಯ 15 ಸದಸ್ಯ ರಾಷ್ಟ್ರಗಳ ಪೈಕಿ 13 ದೇಶಗಳು ಬೆಂಬಲಿಸಿದವು. ರಷ್ಯಾ ಮತ್ತು ಚೀನಾ ಮತದಾನದಿಂದ ದೂರ ಉಳಿದವು. ಇರಾನ್ನ ದಾಳಿಗಳು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದು ಜಾಗತಿಕ ಶಾಂತಿ ಮತ್ತು ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ನಿರ್ಣಯವು ಎತ್ತಿ ತೋರಿಸಿದೆ.
ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯನ್ನು ಇರಾನ್ ಮುಂದುವರಿಸಿದೆ. ಬಹ್ರೇನ್ನ ಮುಹರಕ್ನಲ್ಲಿ ಇಂಧನ ಟ್ಯಾಂಕ್ಗೆ ಬೆಂಕಿ ಹೊತ್ತಿಕೊಂಡಿದೆ. ದುಬೈ ಕ್ರೀಕ್ ಹಾರ್ಬರ್ ಮೇಲೆಯೂ ದಾಳಿ ನಡೆದಿದೆ.






