janadhvani

Kannada Online News Paper

ನಿಮಿಷಪ್ರಿಯ ಪ್ರಕರಣ: ಕೆ.ಎ. ಪಾಲ್ ಯಾರೆಂದು ತಿಳಿಯದು- ಶಾಸಕ ಚಾಂಡಿ ಉಮ್ಮನ್

ನಿಮಿಷಪ್ರಿಯ ಅವರನ್ನು ಉಳಿಸಲು ಭಾರತ ಸರ್ಕಾರದ ಖಾತೆಗೆ ನೇರ ದೇಣಿಗೆ ನೀಡುವಂತೆ ಡಾ. ಕೆ. ಎ. ಪಾಲ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ  ಪೋಸ್ಟ್ ಮಾಡಲಾಗಿತ್ತು

ಕೋಝಿಕ್ಕೋಡ್ | ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸುತ್ತಿರುವ ನಿಮಿಷಪ್ರಿಯಾ ಬಿಡುಗಡೆಗೆ ಸಂಬಂಧಿಸಿದಂತೆ ಅನಗತ್ಯ ಚರ್ಚೆಗಳಿಗೆ ತಾನು ಸಿದ್ಧನಿಲ್ಲ ಎಂದು ಶಾಸಕ ಚಾಂಡಿ ಉಮ್ಮನ್ ಹೇಳಿದ್ದಾರೆ. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಾಗಿ ಹೇಳಿಕೊಳ್ಳುವ ಕೆಎ ಪಾಲ್ ಯಾರೆಂದು ತನಗೆ ತಿಳಿದಿಲ್ಲ ಮತ್ತು ಇನ್ನೂ ಅವರನ್ನು ಭೇಟಿ ಮಾಡಿಲ್ಲ, ಮತ್ತು ಪಾಲ್ ಹಾಗೆ ಮಾಡುವುದನ್ನು ನೋಡಿ ಆಘಾತವಾಯಿತು ಎಂದು ಚಾಂಡಿ ಉಮ್ಮನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಿಮಿಷಪ್ರಿಯಾ ಹೆಸರಿನಲ್ಲಿ ನಕಲಿ ಹಣ ಸಂಗ್ರಹದ ಬಗ್ಗೆ ಸೇವ್ ನಿಮಿಷಪ್ರಿಯಾ ಆಕ್ಷನ್ ಕೌನ್ಸಿಲ್ ಮುಖ್ಯಮಂತ್ರಿಗೆ ದೂರು ನೀಡಿತ್ತು. ನಿಮಿಷಪ್ರಿಯಾ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ಕೆ.ಎ. ಪಾಲ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೋರಿ, ಆಕ್ಷನ್ ಕೌನ್ಸಿಲ್ ಸದಸ್ಯ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಅಡ್ವ. ಸುಭಾಷ್ ಚಂದ್ರನ್ ಅವರು ದೂರು ಸಲ್ಲಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಖಾತೆಗೆ ಹಣ ನೀಡುವಂತೆ ಕೆ.ಎ. ಪಾಲ್ ಅವರು ಬೇಡಿಕೆ ಮುಂದಿಟ್ಟಿದ್ದರು. ವಿದೇಶಾಂಗ ಸಚಿವಾಲಯವು ಫ್ಯಾಕ್ಟ್ ಚೆಕ್ ಮೂಲಕ ಹಣ ಸಂಗ್ರಹ ನಕಲಿ ಎಂದು ಸ್ಪಷ್ಟಪಡಿಸಿತ್ತು.

ನಿಮಿಷಪ್ರಿಯ ಅವರನ್ನು ಉಳಿಸಲು ಭಾರತ ಸರ್ಕಾರದ ಖಾತೆಗೆ ನೇರ ದೇಣಿಗೆ ನೀಡುವಂತೆ ಡಾ. ಕೆ. ಎ. ಪಾಲ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿಪೋಸ್ಟ್ ಮಾಡಲಾಗಿತ್ತು. ಪೋಸ್ಟ್‌ನಲ್ಲಿ 8.3 ಕೋಟಿ ರೂ. ಅಗತ್ಯವಿದೆ ಎಂದು ಹೇಳಲಾಗಿತ್ತು. ನಂತರ ವಿದೇಶಾಂಗ ಸಚಿವಾಲಯವು ಇದು ನಕಲಿ ಪೋಸ್ಟ್ ಮತ್ತು ಹಣ ಸಂಗ್ರಹಿಸುವ ಹಗರಣ ಎಂದು ಸ್ಪಷ್ಟಪಡಿಸಿತು.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮಧ್ಯಸ್ಥಿಕೆ

ಕಳೆದ ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಕಾಂತಪುರಂ ಉಸ್ತಾದರ ಮಧ್ಯಪ್ರವೇಶ ನಂತರ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.

ನಂತರ ನಡೆದ ಬೆಳವಣಿಗೆಗಳ ಆಧಾರದಲ್ಲಿ, ನಿಮಿಷಪ್ರಿಯ ಅವರ ಮರಣದಂಡನೆಯನ್ನು ರದ್ದುಗೊಳಿಸಲು ಒಪ್ಪಿಗೆ ಲಭಿಸಿರುವುದಾಗಿ ಭಾರತೀಯ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಪ್ರಕಟಿಸಿತ್ತು. ಪ್ರಕರಣದಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಂತಪುರಂ ಉಸ್ತಾದ್ ಸ್ಪಷ್ಟಪಡಿಸಿದ್ದರು.

ಮುಂದಿನ ಚರ್ಚೆಗಳ ಆಧಾರದ ಮೇಲೆ ಮರಣದಂಡನೆಯನ್ನು ರದ್ದುಗೊಳಿಸಲು ಮತ್ತು ಇತರ ವಿಷಯಗಳ ಬಗ್ಗೆ ನಿರ್ಧರಿಸಲು ಒಪ್ಪಿಗೆ ನೀಡಲಾಗಿದೆ. ಭಾರತೀಯ ಗ್ರಾಂಡ್ ಮುಫ್ತಿಯ ಕೋರಿಕೆಯ ಮೇರೆಗೆ ಶೈಖ್ ಉಮರ್ ಬಿನ್ ಹಫೀಝ್ ತಂಙಳ್ ನೇಮಿಸಿದ ಯೆಮೆನ್ ವಿದ್ವಾಂಸರ ನಿಯೋಗದ ಜೊತೆಗೆ, ಉತ್ತರ ಯೆಮೆನ್ ಆಡಳಿತಗಾರರು ಮತ್ತು ಅಂತರರಾಷ್ಟ್ರೀಯ ರಾಜತಾಂತ್ರಿಕರು ಭಾಗವಹಿಸಿದ್ದ ಮಧ್ಯಸ್ಥಿಕೆ ಮಾತುಕತೆಯ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಚೇರಿ ತಿಳಿಸಿತ್ತು.