ಕೋಝಿಕ್ಕೋಡ್ | ದೇಶದ ಸರ್ವರಿಗೂ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಅವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ನಮ್ಮ ಪೂರ್ವಜರ ತ್ಯಾಗದ ಮೇಲೆ ನಿರ್ಮಿಸಲಾದ ನಮ್ಮ ಸಂವಿಧಾನವಾಗಿದೆ ಈ ದೇಶದ ಅಡಿಪಾಯ ಎಂದು ಅವರು ಹೇಳಿದರು.
ಸಂವಿಧಾನವು ಖಾತರಿಪಡಿಸಿದ ಜಾತ್ಯತೀತತೆ, ಸಹೋದರತ್ವ ಮತ್ತು ಬಹುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನದ ವಿರುದ್ಧ ನಾವು ಜಾಗರೂಕರಾಗಿರಬೇಕು. ವಿಭಜನೆಯ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮತ್ತು ಸಾಂವಿಧಾನಿಕ ಸಂಸ್ಥೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ದೇಶದ ಉಳಿವು ಮತ್ತು ಉನ್ನತಿಗೆ ಅತ್ಯಗತ್ಯ. ಇದಕ್ಕಾಗಿ, ರಾಜಕೀಯ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಎಲ್ಲರೂ ಮುಂದೆ ಬರಬೇಕು.
ಅದೇ ಸಮಯದಲ್ಲಿ, ನೆರೆಯ ದೇಶಗಳ ಆಕ್ರಮಣ ಪ್ರಯತ್ನಗಳು ಮತ್ತು ಏರುತ್ತಿರುವ ಯುದ್ದದ ಭೀತಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಭಯೋತ್ಪಾದನೆಯ ಮೂಲಕ ಭಾರತೀಯ ಜನರಲ್ಲಿ ವಿಭಜನೆಯನ್ನು ಸೃಷ್ಟಿಸಿ, ಅದರ ಲಾಭ ಪಡೆಯಬಹುದು ಎಂಬುದು ಕೆಲವರ ತಪ್ಪು ಕಲ್ಪನೆ ಮಾತ್ರವಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ಶಕ್ತಿಯುತವಾಗಿ ಒಗ್ಗೂಡುವುದು ನಮ್ಮ ದೇಶದ ಶ್ರೇಷ್ಠ ಸಂಪ್ರದಾಯವಾಗಿದೆ.
ದೇಶದ ನಿಜವಾದ ಶಕ್ತಿಯೆಂದರೆ, ನಮ್ಮ ರೈತರು ಮತ್ತು ಯುವಕರು. ದೇಶದ ಪೋಷಕರಾದ ರೈತರು ನಮ್ಮ ಆರ್ಥಿಕತೆಯ ಬೆನ್ನೆಲುಬಾದರೆ, ದೇಶದ ಭವಿಷ್ಯದ ಕನಸುಗಳು ಮತ್ತು ಭರವಸೆಗಳೆಂದರೆ ನಮ್ಮ ಯುವಕರಾಗಿದ್ದಾರೆ. ಈ ಎರಡೂ ವಿಭಾಗಗಳಿಗೆ ಉಜ್ವಲ ಭಾರತವನ್ನು ನಿರ್ಮಿಸುವಲ್ಲಿ ನೇತೃ ಸ್ಥಾನವನ್ನು ವಹಿಸಲು ಸಾಧ್ಯವಿದೆ.
ಸ್ವಾತಂತ್ರ್ಯ ಎಂದರೆ ಇತರರ ಹಕ್ಕುಗಳನ್ನು ಉಲ್ಲಂಘಿಸುವ ಅಧಿಕಾರವಲ್ಲ, ಬದಲಾಗಿ ದೇಶದ ಕಾನೂನುಗಳನ್ನು ಎತ್ತಿಹಿಡಿದು, ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಒಂದು ಅವಕಾಶವಾಗಿದೆ. ಈ ಸ್ವಾತಂತ್ರ್ಯ ದಿನದಂದು, ನಮ್ಮ ಸ್ಥಾಪಕ ಪಿತಾಮಹರು ಕಲ್ಪಿಸಿಕೊಂಡ ಭಾರತವನ್ನು ರಕ್ಷಿಸಲು ಮತ್ತು ದೇಶದ ಸಮಗ್ರತೆಯನ್ನು ಕಾಪಾಡಲು ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ ಎಂದು ಭಾರತದ ಗ್ರಾಂಡ್ ಮುಫಿ ಹೇಳಿದರು.







