janadhvani

Kannada Online News Paper

ಮಂಗಳೂರು ಗುಂಪು ಹತ್ಯೆ: ಗೃಹ ಸಚಿವರ ಬೇಜವಾಬ್ದಾರಿಯುತ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ

ಆರೋಪಿಗಳನ್ನು ರಕ್ಷಿಸುವ ಪ್ರಯತ್ನವನ್ನು ಗೃಹ ಸಚಿವರೇ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಹೊರವಲಯದ ಕುಡುಪು ಎಂಬಲ್ಲಿ ಅಪರಿಚಿತ ಯುವಕನ ಮೇಲೆ 25 ರಿಂದ 30 ಜನರ ಗುಂಪು ಹಲ್ಲೆ ನಡೆಸಿದ ಪರಿಣಾಮ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಎರಡು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಜಾತ್ಯಾತೀತ ಕಾಂಗ್ರೆಸ್ ಸರ್ಕಾರದ ಗೃಹ ಸಚಿವ ಜಿ. ಪರಮೇಶ್ವ‌ರ್ “ಮಂಗಳೂರು ಅಪರಿಚಿತ ಯುವಕನ ಗುಂಪು ಹತ್ಯೆಗೆ ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕಾರಣ” ಎಂದು ಹೇಳಿಕೆ ನೀಡಿದ್ದಾರೆ.ಮಂಗಳೂರಿನ ಘಟನೆಯ ಬಗ್ಗೆ ಬೆಂಗಳೂರಿನಲ್ಲಿ ಇಂಗ್ಲಿಷ್ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಗೃಹ ಸಚಿವರ ಈ ಬೇಜವಾಬ್ದಾರಿಯುತ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಚಿವರೇ ಹೇಳುವಂತೆ, ನನಗೆ ಪೂರ್ಣ ಮಾಹಿತಿ ದೊರೆತಿಲ್ಲ ಎಂದಾದರೆ, ಪ್ರಕರಣದ ದಿಕ್ಕು ತಪ್ಪಿಸುವ ಆಥವಾ ಆರೋಪಿಗಳನ್ನು ಪಾರು ಮಾಡುವ ದುರುದ್ದೇಶ ಈ ಹೇಳಿಕೆಯ ಹಿಂದೆ ಇದೆ ಎಂದು ಆರೋಪಗಳು ಕೇಳಿಬರುತ್ತಿವೆ. ಇವರ ಹೇಳಿಕೆಗಿಂತ ಮೊದಲು ಮಂಗಳೂರು ನಗರ ಪೊಲೀಸ್‌ ಕಮಿಷನ‌ರ್ ಅನುಪಮ್ ಅಗರ್ವಾಲ್ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಅವರು ಈ ಮಾಹಿತಿಯನ್ನು ನೀಡಿಯೇ ಇಲ್ಲ. ಆದರೆ, ಈ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಿದ್ದು ಯಾರು ಎಂಬ ಪ್ರಶ್ನೆಯನ್ನು ಸದ್ಯ ಸೋಷಿಯಲ್‌ ಮೀಡಿಯಾಗಳಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಯುವಕನ ಗುಂಪು ಹತ್ಯೆಯ ಆರೋಪದಲ್ಲಿ 25 ರಿಂದ 30 ಜನರು ಭಾಗಿಯಾಗಿದ್ದಾರೆ. ಈಗಾಗಲೇ ಹದಿನೈದು ಮಂದಿಯನ್ನು ಬಂಧಿಸಲಾಗಿದೆ ಎಂದು ಇದಕ್ಕಿಂತ ಮೊದಲು ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಗೃಹ ಸಚಿವರು ಬೇರೆಯದೇ ಆದ ಮಾಹಿತಿಯನ್ನು ನೀಡುತ್ತಿದ್ದಾರೆ.

ಇವರಿಗೆ ಈ ಮಾಹಿತಿಯನ್ನು ನೀಡಿದ್ದು ಯಾರು ? ಬಿಜೆಪಿ ಪಕ್ಷದ ಅಣತಿಯಂತೆ ಇವರು ಹೇಳಿಕೆಯನ್ನು ನೀಡಿದ್ದಾರ? ಆರೋಪಿಗಳನ್ನು ರಕ್ಷಿಸುವ ಪ್ರಯತ್ನವನ್ನು ಗೃಹ ಸಚಿವರೇ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಗೃಹ ಸಚಿವ ಜಿ. ಪರಮೇಶ್ವರ್, “ಅಪರಿಚಿತ ವ್ಯಕ್ತಿಯೊಬ್ಬನ ಮೇಲೆ ಗುಂಪು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಸ್ಥಳೀಯ ಕ್ರಿಕೆಟ್‌ ಪಂದ್ಯದ ವೇಳೆ ಅವರು ‘ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಿದ್ದರು. ಇದರಿಂದಾಗಿ ಅಲ್ಲಿದ್ದ ಕೆಲವರು ಅವರನ್ನು ಥಳಿಸಿದ್ದಾರೆ ಎಂದು ನನಗೆ ಬಂದಿರುವ ವರದಿ. ಒಂದು ವೇಳೆ ಅಪರಿಚಿತ ಯುವಕ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಿದ್ದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸಬಾರದಿತ್ತು. ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ.

ಮಂಗಳೂರು ಪೋಲೀಸ್ ಕಮಿಷನರ್ ಮಾಹಿತಿ

ಭಾನುವಾರ ಮಂಗಳೂರಿನ ಕುಡುಪು ಬಳಿ ಅನುಮಾನಸ್ಪದವಾಗಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದು, ಕುಡುಪು ದೇವಸ್ಥಾನ ಬಳಿ ಕ್ರಿಕೆಟ್ ಟೂರ್ನಮೆಂಟ್ ಆಗುತಿತ್ತು, ಈ ವೇಳೆ ಮೂವತ್ತೈದರ ಹರೆಯದ ವ್ಯಕ್ತಿ ಒಬ್ಬ ಅಲ್ಲಿ ಹೋಗಿದ್ದು. ಈ ವೇಳೆ ಅಲ್ಲಿ ನಿಂತಿದ್ದ ಸಚಿನ್ ಎಂಬ ವ್ಯಕ್ತಿಯ ಜೊತೆ ಗಲಾಟೆಯಾಗಿತ್ತು, ಈ ವೇಳೆ ಕ್ರಿಕೆಟ್ ನೋಡಲು ಬಂದಿದ್ದ ಕೆಲವರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಯುವಕನ ದೇಹದ ಸೂಕ್ಷ್ಮ ಜಾಗಕ್ಕೆ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾನೆ ಎಂದು ಪೊಲೀಸ ಆಯುಕ್ತರು ತಿಳಿಸಿದ್ದಾರೆ.

ಸುಮಾರು 30 ಮಂದಿ ಹಲ್ಲೆ ನಡೆಸಿದ ಸಾದ್ಯತೆ ಇದ್ದು, ಈಗಾಗಲೇ ಸಚಿನ್, ದೇವದಾಸ್, ಮಂಜುನಾಥ್ ಸೇರಿದಂತೆ ಹದಿನೈದು ಜನರನ್ನು ವಶಕ್ಕೆ ಪಡೆದಿದ್ದೇವೆ. ಈ ಘಟನೆ ಪ್ರಮುಖ ಆರೋಪಿ ಸಚಿನ್ ಆಟೋ ಡ್ರೈವರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ಮಂದಿಗೂ ಅಧಿಕ ಜನ ಮಾರಣಾಂತಿಕ ಹಲ್ಲೆ ಮಾಡಿರುವ ಸಾಧ್ಯತೆ ಇದ್ದು, ಕೊಲೆಯಾದ ವ್ಯಕ್ತಿ ಯಾರೆಂದು ಇನ್ನೂ ಗೊತ್ತಾಗಿಲ್ಲ. ಉತ್ತರ ಭಾರತ ಅಥವಾ ಕೇರಳ ಮೂಲದ ವ್ಯಕ್ತಿಯಾಗಿರುವ ಶಂಕೆ ಇದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳು