janadhvani

Kannada Online News Paper

ದೇಶದ ಹೆಸರನ್ನು ಇಂಡಿಯಾ ಬದಲು ‘ಭಾರತ್’ ಎಂದು ಮರುನಾಮಕರಣ ಮಾಡಲು ಸಿದ್ಧತೆ

ರಾಷ್ಟ್ರಪತಿ ಭವನದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್‌ ಆಫ್‌ ಇಂಡಿಯಾ ಬದಲು ಪ್ರೆಸಿಡೆಂಟ್‌ ಆಫ್‌ ಭಾರತ್‌ ಎಂದು ಉಲ್ಲೇಖ ಮಾಡಲಾಗಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾವನ್ನು ‘ಭಾರತ್’ ಎಂದು ಮರುನಾಮಕರಣ ಮಾಡುವ ನಿರ್ಣಯ ಮಂಡಿಸುವ ಸಾಧ್ಯತೆಯಿದೆ.

ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ಹೊಸ ಸಂಸತ್ ಭವನದಲ್ಲಿ ನಿರ್ಣಯವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಸಮಯ, ಶೂನ್ಯ ಸಮಯ ಮತ್ತು ಖಾಸಗಿ ಸದಸ್ಯರ ವ್ಯವಹಾರ ಇರುವುದಿಲ್ಲ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನಡೆಯುವ ಅಧಿವೇಶನಗಳಿಗೆ ಇದನ್ನು ನಿರ್ವಹಿಸಲಾಗುತ್ತದೆ.

ಇಂದು ಬೆಳಗ್ಗೆ ಎಕ್ಸ್ ನಲ್ಲಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಜಿ20 ಶೃಂಗಸಭೆಯ ಹಿನ್ನಲೆಯಲ್ಲಿ ಸೆ. 9 ರಂದು ರಾತ್ರಿ ಭೋಜನಕೂಟಕ್ಕೆ ರಾಷ್ಟ್ರಪತಿ ಭವನದಿಂದ ಆಹ್ವಾನ ಬಂದಿದೆ. ಸಾಮಾನ್ಯವಾಗಿ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್‌ ಆಫ್‌ ಇಂಡಿಯಾ ಎಂದು ಉಲ್ಲೇಖವಿರುತ್ತಿತ್ತು. ಆದರೆ, ಈ ಬಾರಿಯ ಪತ್ರದಲ್ಲಿ ಪ್ರೆಸಿಡೆಂಟ್‌ ಆಫ್‌ ಭಾರತ್‌ ಎಂದು ಉಲ್ಲೇಖ ಮಾಡಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದೂ ಕೂಡ ಅಧಿಕೃತವಾಗಿ ಸರ್ಕಾರ ದೇಶದ ಹೆಸರನ್ನು ಇಂಡಿಯಾ ಎನ್ನುವುದರ ಬದಲು ಭಾರತ್‌ ಎಂದು ಮರುನಾಮಕರಣ ಮಾಡಲಿದೆ ಎನ್ನುವ ಸೂಚನೆ ನೀಡಿದೆ.

ಅಧಿಕೃತ ಜಿ 20 ಶೃಂಗಸಭೆಯ ಆಹ್ವಾನಗಳಲ್ಲಿ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಎಂಬ ಉಲ್ಲೇಖವನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ಬದಲಾಯಿಸಲು ಬಿಜೆಪಿಯ ತೀರ್ಮಾನ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಮತ್ತು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ಹೇಗೆ ‘ಇಂಡಿಯಾ’ವನ್ನು ಹೊಡೆದು ಹಾಕುತ್ತದೆ? ದೇಶವು ರಾಜಕೀಯ ಪಕ್ಷಕ್ಕೆ ಸೇರಿಲ್ಲ; ಇದು 135 ಕೋಟಿ ಭಾರತೀಯರಿಗೆ ಸೇರಿದ್ದು. ನಮ್ಮ ರಾಷ್ಟ್ರೀಯ ಅಸ್ಮಿತೆ ಬಿಜೆಪಿಯ ವೈಯಕ್ತಿಕ ಆಸ್ತಿಯಲ್ಲ, ಅದು ಮನಸೋಇಚ್ಛೆ ಮತ್ತು ಕಲ್ಪನೆಗಳ ಮೇಲೆ ಮಾರ್ಪಡಿಸುವಂತಿಲ್ಲ ಎಂದು ಆಪ್‌ ಸಂಸದ ರಾಘವ್‌ ಚಡ್ಡಾ ಟ್ವೀಟ್‌ ಮಾಡಿದ್ದಾರೆ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಟ್ಟಿರುವುದರಿಂದ ದೇಶದ ಹೆಸರನ್ನು ಭಾರತ್ ಎಂದು ಮರು ನಾಮಕರಣ ಮಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ.

ಇತ್ತೀಚೆಗಷ್ಟೇ ವಿರೋಧ ಪಕ್ಷ ತನ್ನ ಮೈತ್ರಿಕೂಟಕ್ಕೆ I.N.D.I.A. ಮರುನಾಮಕರಣ ಮಾಡಿಕೊಂಡಿದೆ. ಇದು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಎನ್‌ಡಿಎಯನ್ನು ಎದುರಿಸಲು ಯೋಜಿಸಿರುವ ಸುಮಾರು 28 ಪಕ್ಷಗಳನ್ನು ಒಳಗೊಂಡಿದೆ.