janadhvani

Kannada Online News Paper

ನೂರಾರು ಬಡ ಕುಟುಂಬಕ್ಕೆ ನೆರವಾಗಿದ್ದ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ನಿಧನ

ಸಮುದಾಯದ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಬಡ ಕುಟುಂಬಗಳ ಏಳಿಗೆಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದರು.

ಬೆಳ್ತಂಗಡಿ: ಬೆಳ್ತಂಗಡಿಯ ಗರ್ಡಾಡಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ‘ನಂಡೆ ಪೆಂಙಳ್’ ಎಂಬ ವಿಶೇಷ ಅಭಿಯಾನದ ಮೂಲಕ ನೂರಾರು ಬಡ ಹೆಣ್ಣುಮಕ್ಕಳ ವಿವಾಹಕ್ಕೆ ನೆರವಾಗಿದ್ದ ಸಾಮಾಜಿಕ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ಬೆಳಗ್ಗೆ ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಸಮೀಪ ಖಾಸಗಿ ಬಸ್ ಹಾಗೂ ನೌಶಾದ್ ಹಾಜಿ ಸೂರಲ್ಪಾಡಿ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸಾವಿರಾರು ಜನರ ಕಷ್ಟಗಳಿಗೆ ನೆರಳಾಗಿದ್ದ ನೌಶಾದ್ ಹಾಜಿ ಸೂರಲ್ಪಾಡಿ, ಉತ್ತರ ಕರ್ನಾಟಕ ಭಾಗದ ದೀನಿ ಚಟುವಟಿಕೆಗೆ ಸಹಾಯ ಹಸ್ತ ಚಾಚಿದ್ದರು. ಶಾಂತ ಸ್ವಭಾವದ ನಗುಮುಖದ ವ್ಯಕ್ತಿತ್ವ ಹೊಂದಿದ್ದರು.

ನೌಶಾದ್ ಹಾಜಿಯವರು ಸೂರಲ್ಪಾಡಿ ನಿವಾಸಿಯಾಗಿದ್ದು, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ನ ನೂತನ ಅಧ್ಯಕ್ಷರಾಗಿದ್ದು, ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಸಮುದಾಯದ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಬಡ ಕುಟುಂಬಗಳ ಏಳಿಗೆಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದರು.

ಇನ್ನೂ ಅಪಘಾತದಲ್ಲಿ ಮೃತಪಟ್ಟ ಮತ್ತೋರ್ವರನ್ನು ನೌಶಾದ್ ಹಾಜಿ ಸೂರಲ್ಪಾಡಿ ಅವರ ಕಾರು ಚಾಲಕ ಮುಷರಫ್ ಎಂದು ಗುರುತಿಸಲಾಗಿದೆ. ಅವರು ಉಳಾಯಿಬೆಟ್ಟು ನಿವಾಸಿಯಾಗಿದ್ದಾರೆ.

ಮೂಡುಬಿದಿರೆ ಕಾಶಿಪಟ್ಣದ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿಯಾಗಿ, ಗುರುಪುರ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಇವರು ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.