janadhvani

Kannada Online News Paper

ಮುಸ್ಲಿಂ ಎಂಬ ಕಾರಣಕ್ಕೆ ಟ್ರೋಲ್‌ ಮಾಡುವವರು ನೈಜ ಭಾರತೀಯನಾಗಲು ಸಾಧ್ಯವಿಲ್ಲ- ಮೊಹಮ್ಮದ್‌ ಶಮಿ

"ನಾವು ಏನು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನಮಗೆ ಭಾರತ ಎಂದರೆ ಎಷ್ಟು ಮುಖ್ಯ ಎಂಬುದನ್ನು ಹೇಳಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ನಾವು ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ. ನಮ್ಮ ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಇಲ್ಲಿ ನಮ್ಮ ದೇಶ ಪ್ರೇಮ ಸಾಬೀತು ಪಡಿಸುವ ಅನಿವಾರ್ಯತೆ ನಮಗಿಲ್ಲ. ಅದರಲ್ಲೂ ಇಂತಹ ಟ್ರೋಲ್‌ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ,"

ಹೊಸದಿಲ್ಲಿ: ಕಳೆದ ವರ್ಷ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೂಪರ್‌ 12 ಹಂತದಲ್ಲಿ ಪಾಕಿಸ್ತಾನ ಎದುರು 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌ಗಳು ಹರಿದಾಡಿದ್ದವು.

ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಬಂಗಾಳದ ವೇಗಿ ಶಮಿ, ಮುಸ್ಲಿಂ ಎಂಬ ಕಾರಣಕ್ಕೆ ಟ್ರೋಲ್‌ ಮಾಡುವವರು ಯಾವುದೇ ಕಾರಣಕ್ಕೂ ನಿಜವಾದ ಭಾರತೀಯರಾಗಲು ಸಾಧ್ಯವಿಲ್ಲ. ತಮ್ಮ ಗುರುತು ಮರೆಮಾಚಿ ಇಂತಹ ಕುಚೇಷ್ಟೆ ಮಾಡುವವರು ಹೇಡಿಗಳು ಎಂದಿದ್ದಾರೆ.

ಅಕ್ಟೋಬರ್‌ 24ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕ್‌ ವಿರುದ್ಧ 3.5 ಓವರ್‌ಗಳನ್ನು ಎಸೆದಿದ್ದ ಶಮಿ 43 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅಂದು ಪಾಕಿಸ್ತಾನ ತಂಡ ಐಸಿಸಿ ವಿಶ್ವಕಪ್‌ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಎದುರು ತನ್ನ ಮೊತ್ತ ಮೊದಲ ಜಯದ ಸಂಭ್ರಮ ಆಚರಿಸಿತ್ತು.

ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಸೋತು ಅನುಭವಿಸಿದ ಮರ್ಮಾಘಾತದಿಂದ ಚೇತರಿಸದೇ ತನ್ನ ಎರಡನೇ ಪಂದ್ಯದಲ್ಲೂ ನ್ಯೂಜಿಲೆಂಡ್‌ ಎದುರು ಮುಗ್ಗರಿಸಿತ್ತು. ಪರಿಣಾಮ ಸೂಪರ್‌ 12 ಹಂತದಲ್ಲೇ ಸ್ಪರ್ಧೆಯಿಂದ ಹೊರಬೀಳಬೇಕಾಯಿತು.

ಸೋಷಿಯಲ್‌ ಮೀಡಿಯಾ ಟ್ರೋಲ್‌ಗಳ ಬಳಿಕ ಶಮಿ ಬೆಂಬಲಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗರು ನಿಂತರು. ಸುನಿಲ್‌ ಗವಾಸ್ಕರ್‌, ಸಚಿನ್‌ ತೆಂಡೂಲ್ಕರ್‌, ಇರ್ಫಾನ್‌ ಪಠಾಣ್, ವೀರೇಂದ್ರ ಸೆಹ್ವಾಗ್‌ ಅಂದಿನ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಎಲ್ಲರೂ ಬಲಗೈ ವೇಗಿ ಪರವಾಗಿ ದನಿಯೆತ್ತಿದ್ದರು. ಬೆನ್ನೆಲುಬಿಲ್ಲದವರು ಈ ರೀತಿಯ ಟ್ರೋಲ್‌ ಮಾಡುತ್ತಾರೆಂದು ಟೀಕಿಸಿದ್ದರು.

“ಈ ರೀತಿಯ ಮನಸ್ಥಿತಿಗೆ ಮದ್ದಿಲ್ಲ. ಧರ್ಮ ಮುಂದಿಟ್ಟು ಟ್ರೋಲ್‌ ಮಾಡುವವರು ನಿಜವಾದ ಅಭಿಮಾನಿಗಳಲ್ಲ. ಒಬ್ಬ ಆಟಗಾರನನ್ನು ಹೀರೋ ಎಂದು ಕರೆದು, ಈ ರೀತಿ ನಡೆದುಕೊಂಡರೆ ನೀವು ನಿಜವಾದ ಭಾರತೀಯರಾಗಲು ಸಾಧ್ಯವಿಲ್ಲ. ಈ ರೀತಿಯ ಜನ ಆಡುವ ಮಾತುಗಳಿಂದ ಯಾರೊಬ್ಬರೋ ನೋವನುಭವಿಸಬಾರದು,” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ಸಂದರ್ಶನದಲ್ಲಿ ಶಮಿ ಹೇಳಿದ್ದಾರೆ.

“ಇದು ಆ ಜನರ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ಶಿಕ್ಷಣದ ಮಟ್ಟವನ್ನು ತಿಳಿಸಿಕೊಡುತ್ತದೆ. ಕೆಲವೇ ಫಾಲೋವರ್ಸ್‌ ಹೊಂದಿರುವವರು, ನಕಲಿ ಪ್ರೊಫೈಲ್‌ಗಳನ್ನು ಹೊಂದಿರುವವರು ಈ ರೀತಿ ಬೇರೆಯವರ ಕಡೆಗೆ ಬೊಟ್ಟು ಮಾಡುತ್ತಾರೆ. ಇದರಿಂದ ಅವರಿಗೆ ಆಗುವ ನಷ್ಟವೇನು ಇಲ್ಲ. ಯಾವು ಯಾರೆಂದು ಪತ್ತೆ ಮಾಡಲಾಗದು ಎಂಬ ಕಾರಣಕ್ಕೆ ಹೀಗೆಲ್ಲಾ ಮಾತನಾಡುತ್ತಾರೆ. ಅವರಿಗೆ ನಾವು ಪ್ರತಿಕ್ರಿತೆ ಕೊಟ್ಟರೆ, ಅಂತಹ ವ್ಯಕ್ತಿಗಳಿಗೆ ಅನಗತ್ಯ ಪ್ರಚಾರ ಕೊಟ್ಟಂತಾಗುತ್ತದೆ. ಹೀಗಾಗಿ ಅವರಿಂದ ದೂರ ಉಳಿಯುವುದು ಒಳಿತು,” ಎಂದಿದ್ದಾರೆ.

“ನಾವು ಏನು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನಮಗೆ ಭಾರತ ಎಂದರೆ ಎಷ್ಟು ಮುಖ್ಯ ಎಂಬುದನ್ನು ಹೇಳಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ನಾವು ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ. ನಮ್ಮ ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಇಲ್ಲಿ ನಮ್ಮ ದೇಶ ಪ್ರೇಮ ಸಾಬೀತು ಪಡಿಸುವ ಅನಿವಾರ್ಯತೆ ನಮಗಿಲ್ಲ. ಅದರಲ್ಲೂ ಇಂತಹ ಟ್ರೋಲ್‌ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ,” ಎಂದು ಹೇಳಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ವಿಶ್ರಾಂತಿ ಪಡೆದಿರುವ ಶಮಿ, ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ಬಳಿಕ ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ಪರ ಕಣಕ್ಕಿಳಿಯಲಿದ್ದಾರೆ.