ಮಂಗಳೂರು,ಫೆ.21: ಅನಿವಾಸಿ ಕನ್ನಡಿಗರ ಬಹು ನಿರೀಕ್ಷಿತ ಬೇಡಿಕೆಯೊಂದು ಈಡೇರುತ್ತಿದೆ. ಮಂಗಳೂರು ಮತ್ತು ಸೌದಿ ಅರೇಬಿಯಾದ ಜಿದ್ದಾ ನಡುವೆ ನೇರ ವಿಮಾನಯಾನವು ಆರಂಭಗೊಳ್ಳಲಿದೆ.
ಮುಂದಿನ ಮಾರ್ಚ್ ತಿಂಗಳ 2 ರಿಂದ ವಿಮಾನ ಸೇವೆ ಆರಂಭಗೊಳ್ಳುವುದಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರಕಟಿಸಿದ್ದಾಗಿ ಟ್ರಾವೆಲ್ ಏಜೆನ್ಸಿಗಳು ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ವೆಬ್ಸೈಟ್ನಲ್ಲಿ ಜಿದ್ದಾ ಮತ್ತು ಮಂಗಳೂರು ನಡುವಿನ ಬುಕಿಂಗ್ ಆರಂಭಗೊಂಡಿದೆ. ಮಾರ್ಚ್ ತಿಂಗಳ 2, 9, 16 ಮತ್ತು 23 ದಿನಾಂಕಗಳಲ್ಲಿ ಜಿದ್ದಾದಿಂದಲೂ, ಅದೇ ದಿನ ಮಂಗಳೂರಿನಿಂದಲೂ ವಿಮಾನ ಲಭ್ಯವಿದೆ.
ಮಂಗಳೂರಿನಿಂದ ಬೆಳಿಗ್ಗೆ 08-55 ಕ್ಕೆ ಹೊರಟು ಸೌದಿ ಸಮಯ ಮಧ್ಯಾಹ್ನ 12-45 ಕ್ಕೆ ಜಿದ್ದಾ ತಲುಪಲಿದೆ. ಜಿದ್ದಾದಿಂದ ಮಧ್ಯಾಹ್ನ 1-45 ಕ್ಕೆ ಹೊರಟು ರಾತ್ರಿ 9.40 ಕ್ಕೆ ಮಂಗಳೂರು ತಲುಪಲಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ವೆಬ್ಸೈಟ್ನಲ್ಲಿ, ಮಂಗಳೂರಿನಿಂದ 30,812 ರೂಪಾಯಿ ಹಾಗೂ ಜಿದ್ದಾದಿಂದ 16,121 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಉಮ್ರಾ ಹಾಗೂ ಇತರ ಯಾತ್ರಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ಜಿದ್ದಾ ಅಥವಾ ಮದೀನಾಕ್ಕೆ ನೇರ ವಿಮಾನ ಯಾನದ ವ್ಯವಸ್ಥೆ ಕಲ್ಪಿಸುವಂತೆ ಹಜ್ ಮತ್ತು ಉಮ್ರಾ ಟೂರ್ ಏಜೆನ್ಸಿಗಳು ಸೇರಿದಂತೆ ವಲಸಿಗ ಕನ್ನಡಿಗರು ಹಾಗೂ ನೆರೆರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯ ಪ್ರಯಾಣಿಕರ ಬೇಡಿಕೆಯಾಗಿತ್ತು.
ಇಲ್ಲಿಂದ ಉಮ್ರಾ ನಿರ್ವಹಿಸಲು ಬೆಂಗಳೂರು, ಕೋಝಿಕ್ಕೋಡ್ ಅಥವಾ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವಲಂಬಿಸಬೇಕಿತ್ತು. ಇದಲ್ಲದೆ ಅನಿವಾಸಿ ಭಾರತೀಯ ಉದ್ಯಮಿಗಳು, ಸೌದಿಯಲ್ಲಿರುವ ಉದ್ಯೋಗಸ್ಥರು ಹಾಗೂ ಇತರ ಪ್ರಯಾಣಿಕರಿಗೆ ಮಂಗಳೂರು ಜಿದ್ದಾ ನೇರ ಬಹಳ ಪ್ರಯೋಜನಕಾರಿ.







