janadhvani

Kannada Online News Paper

ವರದಿಗಾರನ ಅತಿರೇಕ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಧ್ಯಪ್ರವೇಶಲಿ- ಎಸ್‌ವೈಎಸ್

ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಮಾಧ್ಯಮಗಳು ತಲುಪಿರುವ ನೈತಿಕ ಅಧಃಪತನಕ್ಕೆ ಸಾಕ್ಷಿಯೂ ಆಗಿದೆ.

ಮಂಗಳೂರು: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕೆಲವು ಪತ್ರಕರ್ತರ ವರ್ತನೆಯು ಆಕ್ಷೇಪಾರ್ಹವಾಗಿದ್ದು ಶಾಲಾ ಕಾಲೇಜುಗಳ ಆವರಣದಲ್ಲೇ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ| ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಆಗ್ರಹಿಸಿದ್ದಾರೆ.

ಪತ್ರಕರ್ತನೋರ್ವ ಭಯಭೀತಳಾದ ವಿದ್ಯಾರ್ಥಿನಿಯೋರ್ವಳನ್ನು ಬೆನ್ನಟ್ಟಿ ವಿಡಿಯೋ ಮಾಡುತ್ತಿರುವ ಕರುಣಾಜನಕ ದೃಶ್ಯವೊಂದು ವೈರಲಾಗುತ್ತಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಮಾಧ್ಯಮಗಳು ತಲುಪಿರುವ ನೈತಿಕ ಅಧಃಪತನಕ್ಕೆ ಸಾಕ್ಷಿಯೂ ಆಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಬಗ್ಗೆ ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಬೇಕು.ಇಂತಹ ಸಂದರ್ಭದಲ್ಲಿ ಮಕ್ಕಳ ನೆರವಿಗೆ ಬಾರದ ಶಿಕ್ಷಕ ಶಿಕ್ಷಕಿಯರ ವಿರುದ್ಧವೂ ಕ್ರಮಕೈಗೊಳ್ಳಬೇಕು. ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನ್ಯಾಯವನ್ನು ಖಾತರಿಪಡಿಸಬೇಕು.

ಶಾಲಾ ಕಾಲೇಜು ಆವರಣದಲ್ಲಿ ಭಯಾನಕ ವಾತಾವರಣ ಸೃಷ್ಟಿಸುವ ಪತ್ರಕರ್ತರ ವಿರುದ್ಧ ಆಯೋಗವು ಕ್ರಮ ಕೈಗೊಳ್ಳಬೇಕಾಗಿರುವುದು ತುರ್ತು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಎಸ್‌ವೈಎಸ್,
ಪತ್ರಕರ್ತರು ಶಾಲಾ-ಕಾಲೇಜು ಆವರಣ ಪ್ರವೇಶಿಸಿ ವಿದ್ಯಾರ್ಥಿಗಳಿಂದ ಬಲವಂತದ ಹೇಳಿಕೆ ಪಡೆಯದಂತೆ ಆಯೋಗವು ಆದೇಶಿಸಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿದೆ.