janadhvani

Kannada Online News Paper

ಮುಸ್ಲಿಮ್ ಶಾಸಕರಿಂದ ಸಿಎಂ ಭೇಟಿ- ಶಾಂತಿಯುತವಾಗಿ ಹಿಜಾಬ್ ವಿವಾದ ಪರಿಹರಿಸಲು ಒತ್ತಾಯ

ಬೆಂಗಳೂರು: ಕೊರೋನಾ ವೈರಸ್ ಕಾರಣದಿಂದ ಮುಚ್ಚಲ್ಪಟ್ಟಿದ್ದ ಶೈಕ್ಷಣಿಕ ಕೇಂದ್ರಗಳನ್ನು ಆರಂಭಿಸಿದ ಸಂತೋಷದಲ್ಲಿದ್ದ ವಿದ್ಯಾರ್ಥಿಗಳಿಗೆ ಇದೀಗ ಕೋಮು ವೈರಸ್ ಕಂಟಕ ಎದುರಾಗಿದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ರಾಜ್ಯ ಕಾಂಗ್ರೆಸ್ ಮುಸ್ಲಿಂ ಶಾಸಕರು ಸಿಎಂ ಬಸವರಾಜ ಬೊಮ್ಮಾಯಿರವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಸಿಎಂ ಅವರ ರೇಸ್ಕೋರ್ಸ್ ನಿವಾಸದಲ್ಲಿ ಮುಸ್ಲಿಂ ಜನಪ್ರತಿನಿಧಿಗಳು ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದು, ಹಿಜಾಬ್ ವಿವಾದವನ್ನು ಆದಷ್ಟು ಶೀಘ್ರ ಶಾಂತಿಯುತವಾಗಿ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಮುಂದಿನ ತಿಂಗಳು ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಸಿಎಂನ್ನು ಭೇಟಿಯಾದವರಲ್ಲಿ ಶಾಸಕರಾದ ಯು ಟಿ ಖಾದರ್, ಎನ್.ಎ.ಹ್ಯಾರಿಸ್, ತನ್ವೀರ್ ಸೇಠ್, ಜಮೀರ್ ಅಹ್ಮದ್ ಖಾನ್, ಸಲೀಂ ಅಹಮದ್ , ರಿಸ್ವಾನ್ ಅರ್ಷದ್, ಖನೀಜ್ ಫಾತಿಮಾ ಸೇರಿ ಹಲವರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯು ಟಿ ಖಾದರ್, ಕಳೆದ ಎರಡು ವರ್ಷಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಿಕ್ಷಣ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಕಡಿತ ಮಾಡಲಾಗಿದೆ. ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ಸಮಾನವಾಗಿ ಹಣ ಹಂಚಿಕೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದರು.

ಉಡುಪಿಯಿಂದ ಉದ್ಭವಿಸಿದ ವಿವಾದ

ಯಾವುದೇ ಸಮಸ್ಯೆ ಇಲ್ಲದೆ ಶಿರವಸ್ತ್ರವನ್ನು ಧರಿಸಿ ವಿದ್ಯೆ ಕಲಿಯುತ್ತಿದ್ದ ವಿದ್ಯಾರ್ಥಿನಿಗಳಿಗೆ ಏಕಾಏಕಿ ಪ್ರವೇಶ ನಿರಾಕರಿಸಿದ, ಉಡುಪಿಯ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಿಂದ ಉದ್ಭವಿಸಿದ ವಿವಾದ ಕಿಡಿಯು ರಾಜ್ಯದ ಹಲವು ಜಿಲ್ಲೆಗಳಿಗೆ ಪಸರಿಸಿದೆ.

ಹಿಜಾಬ್ ವಿರುದ್ಧವಾಗಿ ಕೇಸರಿ ಶಾಲು ರಂಗಕ್ಕಿಳಿದು ವಿದ್ಯಾ ದೇಗುಲಗಳಿಗೆ ಕಲ್ಲೆಸೆದು, ವಿದ್ಯಾರ್ಥಿಗಳನ್ನು ಥಳಿಸಿ ಕ್ಯಾಂಪಸ್‌ಗಳನ್ನು ಸಮರ ಭೂಮಿಯಂತೆ ಮಾರ್ಪಡಿಸಿತು.ಕೋಮು ವೈರಸ್ ಎಂಬ ಮಹಾಮಾರಿಯು ಶಾಲಾ-ಕಾಲೇಜುಗಳನ್ನು ಮತ್ತೆ ಮುಚ್ಚುವಂತೆ ಮಾಡಿತು. ಇದೀಗ ವಿವಾದವು ಹೈಕೋರ್ಟ್ ಮೆಟ್ಟಲೇರಿದ್ದು, ವಿಚಾರಣೆ ಮುಂದುವರಿಯುತ್ತಿದೆ.