ಮಂಗಳೂರು: ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ಹೆಸರಿನಲ್ಲಿ ವೀಡಿಯೋ ಒಂದು ಸಾಮಾಜಿಕ ತಾಣದಲ್ಲಿ ವ್ಯಾಪಕ ಪ್ರಚಾರಗೊಂಡಿದ್ದು, ಇದು ಸುಳ್ಳು ಸುದ್ದಿ ಎಂದು ಮಂಗಳೂರಿನ ಪೋಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ. ವೀಡಿಯೋ
ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ನಡೆದಿದೆ ಎಂದು ಬಿಂಬಿಸಿ ಪ್ರಚಾರಗೊಂಡಿರುವ ವೀಡಿಯೋ, ಬೇರೆ ಯಾವುದೋ ಜಿಲ್ಲೆಯಲ್ಲಿ ಯಾವಾಗಲೋ ನಡೆದ ಘಟನೆಯಾಗಿದ್ದು, ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ನ್ಯಾಯಾಲಯದ ಆದೇಶದಂತೆ ಶಾಂತಿಯುತ ತರಗತಿ ನಡೆಸಲು ಎಲ್ಲರೂ ಸಹಕರಿಸಿದ್ದಾರೆ ಎಂದು ಕಮಿಷನರ್ ಹೇಳಿದರು.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಿಜಾಬ್ ಧರಿಸಿ ಶಿಕ್ಷಣ ಪಡೆಯುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಗಳ ಶಿಕ್ಷಣವನ್ನು ಮೊಟಕುಗೊಳಿಸಲೆಂದು ಕೆಲವು ವಿದ್ಯಾರ್ಥಿಗಳು ಕೇಸರೀ ಶಾಲನ್ನು ಧರಿಸಿ ವಿವಾದವೆಬ್ಬಿಸಿರುವ ಹಿನ್ನೆಲೆಯಲ್ಲಿ, ಹಿಜಾಬ್ ಎಂಬ ಮುಸ್ಲಿಂ ಯುವತಿಯರ ಧಾರ್ಮಿಕ ಹಕ್ಕಿನ ಸಂರಕ್ಷಣೆಗಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆಯು ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಇಂದು ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಾಳೆಗೆ ಮುಂದೂಡಿದೆ. ಅಂತಿಮ ತೀರ್ಪು ಬರುವ ತನಕ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಗುರುತುಗಳನ್ನು ಬಳಸಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಶಾಂತಿಯುತವಾಗಿ ತರಗತಿ ನಡೆಯುತ್ತಿರುವ ಕೆಲವು ಶಾಲಾ-ಕಾಲೇಜುಗಳನ್ನು ಬೆನ್ನೆತ್ತಿ ಕೆಲವು ಕೋಮು ವಿಷ ಬೀಜವನ್ನು ಬಿತ್ತುವ ಟಿವಿ ಮಾಧ್ಯಮಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ನೋಡುತ್ತಿದೆ. ಇದನ್ನು ಗಮನಿಸಿದ ಹೈಕೋರ್ಟ್, ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು, ಜವಾಬ್ದಾರಿಯುತ ನಾಗರಿಕರಂತೆ ವರ್ತಿಸಬೇಕು ಎಂದು ಮಾಧ್ಯಮದವರಿಗೆ ಸಲಹೆ ನೀಡಿದೆ.







