janadhvani

Kannada Online News Paper

ಹಿಜಾಬ್‌ ಕಾರಣಕ್ಕೆ ಶಿಕ್ಷಣ ನಿಶೇಧ: ಅತ್ಯಂತ ಭೀಕರ- ಮಲಾಲಾ ಯೂಸುಫ್ ಝಾಯಿ

ನವದೆಹಲಿ: ಹಿಜಾಬ್ ಕಾರಣಕ್ಕೆ ಹೆಣ್ಣುಮಕ್ಕಳಿಗೆ ಶಾಲೆ ಪ್ರವೇಶ ನಿರ್ಬಂಧಿಸಿರುವುದು ಅತ್ಯಂತ ಭೀಕರ ಎಂದ ಪಾಕಿಸ್ತಾನದ ನೊಬೆಲ್ ಶಾಂತೆ ಪುರಸ್ಕೃತೆ ಮಲಾಲಾ ಯೂಸುಫ್ ಝಾಯಿ ಹೇಳಿದ್ದಾರೆ.

ಹಿಜಾಬ್ ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಾಲೇಜುಗಳು ನಮಗೆ ಶಿಕ್ಷಣ ಮತ್ತು ಹಿಜಾಬ್ ನಡುವಿನ ಆಯ್ಕೆಯನ್ನು ಹೇರುತ್ತಿವೆ. ಹೆಣ್ಣು ಮಕ್ಕಳನ್ನು ಅವರ ಹಿಜಾಬ್ ಕಾರಣಕ್ಕಾಗಿ ಶಾಲೆಗೆ ಪ್ರವೇಶ ನೀಡದೇ ಇರುವುದು ಅತ್ಯಂತ ಭೀಕರ. ಕಡಿಮೆ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಮಹಿಳೆಯರನ್ನು ಟೀಕಿಸುವ ಸಂಪ್ರದಾಯ ಮುಂದುವರೆದಿದೆ. ಮುಸ್ಲಿಂ ಮಹಿಳೆಯರನ್ನು ಅಲ್ಪವಾಗಿ ಕಾಣುವ ನೀತಿಯನ್ನು ಭಾರತೀಯ ನಾಯಕರು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಉಡುಪಿಯ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕನೋರ್ವನಿಗೆ ದಿಢೀರ್ ಉಂಟಾದ ಹಿಜಾಬ್ ಅಲರ್ಜಿಯು, ಅದೇ ಕಾಲೇಜಿನ ಪ್ರಾಂಶುಪಾಲರು ಅದ್ಯಾಪಕನನ್ನು ಬೆಂಬಲಿಸಿ, ಹಿಂದಿನಿಂದಲೂ ಶಿರ ವಸ್ತ್ರವನ್ನು ಧರಿಸಿ ಕಾಲೇಜಿಗೆ ಬರುತ್ತಿದ್ದ ಮುಸ್ಲಿಮ್ ವಿದ್ಯಾರ್ಥಿನಿಗಳನ್ನು ಏಕಾಏಕಿ ಕಾಲೇಜ್ ಪ್ರವೇಶವನ್ನು ತಡೆದು ಇಡೀ ರಾಜ್ಯಕ್ಕೇ ಬೆಂಕಿ ಹಚ್ಚಿದ್ದಾರೆ.

ಇಂತಹಾ ಕೋಮುವಾದಿ ಅದ್ಯಾಪಕರು ವಿದ್ಯಾ ದೇಗುಲಕ್ಕೆ ಮಾರಕ, ಇಡೀ ಅದ್ಯಾಪಕ ವೃಂದಕ್ಕೆ ನಾಚಿಕೆಗೇಡು, ಶಿಕ್ಷಣಕ್ಕಾಗಿ ಬಾಗಿಲನ್ನು ತೆರೆಯಬೇಕಿದ್ದ ಅದ್ಯಾಪಕ, ವಿದ್ಯಾರ್ಥಿನಿಗಳ ಮುಂದೆ ಗೇಟು ಮುಚ್ಚಿದ ಘಟನೆ ಇಡೀ ದೇಶಕ್ಕೇ ಕಪ್ಪು ಚುಕ್ಕೆಯಾಗಿದೆ. ಕೇವಲ ಎರಡು ತಿಂಗಳು ಮಾತ್ರ ಉಳಿದಿರುವ ಸದ್ರಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿನಿಗಳ ಕಲಿಕೆಯನ್ನು ತಡೆದ ಪ್ರಕರಣವು ಇಂದು ಹೈಕೋರ್ಟ್ ಮೆಟ್ಟಲೇರಿದೆ. ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಹಕ್ಕನ್ನು ಕೋರ್ಟ್ ಕಾಪಾಡಿ, ಕಲಿಕೆಯನ್ನು ಮುಂದುವರಿಸಬಹುದೆಂಬ ಶುಭ ನಿರೀಕ್ಷೆಯಲ್ಲಿದ್ದಾರೆ.