janadhvani

Kannada Online News Paper

ಸುರತ್ಕಲ್: ಎನ್ಐಟಿಕೆ ಟೋಲ್ಗೇಟ್ ವಿರುದ್ಧದ ಧರಣಿ ಎರಡನೇ ದಿನಕ್ಕೆ

ಆಶಿಫ್ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ,

ಸುರತ್ಕಲ್,ಫೆ.23:ರಾಷ್ಟ್ರೀಯ ಹೆದ್ದಾರಿ 66 ಎನ್ಐಟಿಕೆ ಅಕ್ರಮ ಟೋಲ್ ಗೇಟ್ ಸುಲಿಗೆಯ ವಿರುದ್ಧ ಆಶಿಫ್ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ, ಮಂಗಳವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ಕೆನರಾ ಕೈಗಾರಿಕ ಸಂಘ ಬೈಕಂಪಾಡಿ ಇದರ ಕೋಶಾಧಿಕಾರಿ ಹೇಮಂತ್ ಪೂಜಾರಿ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಾ ಮಾತನಾಡಿ, ಎನ್ಐಟಿಕೆ ಟೋಲ್ಗೇಟ್ ಅದು ಅಕ್ರಮ ಹಾಗೂ ಅವೈಜ್ಞಾನಿಕವಾಗಿದೆ ಸರಿಯಾದ ಮೂಲಭೂತ ಸೌಕರ್ಯಗಳು ಕೂಡ ಇಲ್ಲ, ಕೇವಲ ಒಂಬತ್ತು ಕಿಲೋ ಮೀಟರ್ ಅಂತರದಲ್ಲಿ ಎರಡು ಟೋಲ್ ಗೇಟಿಗೆ ಹಣ ಪಾವತಿಸುವ ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆಯ ನಾವೆಲ್ಲ ದಡ್ಡರಾಗಿದ್ದೇವೆ ಎಂದರು.

ಉಡುಪಿ ಸಿಟಿ ಬಸ್ಸು ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಸಂದೀಪ್ ಸುವರ್ಣ ಮಾತನಾಡುತ್ತಾ, ಸುರತ್ಕಲ್ ಟೋಲ್ ಗೇಟ್ ನ ವಿರುದ್ದ ಜನ ಮತ್ತೆ ಭುಗಿಲೆದ್ದಿದ್ದಾರೆ. ಈ ಟೋಲ್ ಗೇಟ್ ಎಂಬುದು ಸಮಸ್ಯೆಯ ಆಗರವಾಗಿದೆ, ರಾಷ್ಟ್ರೀಯ ಹೆದ್ದಾರಿಯ ನೀತಿ-ನಿಯಮಗಳನ್ನು ಪಾಲಿಸದೇ ಶುಲ್ಕ ವಸೂಲು ಮಾಡುತ್ತಿದ್ದು, ಇದನ್ನು ಬಂದ್ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಆಶಿಫ್ ಆಪದ್ಬಾಂಧವ, 24 ಗಂಟೆ ರಸ್ತೆ ನಿರ್ವಹಣೆ ಮಾಡಬೇಕು, ಹೆದ್ದಾರಿಯುದ್ದಕ್ಕೂ ದಾರಿ ದೀಪ, ಅಲ್ಲಲ್ಲಿ ಕುಡಿಯುವ ನೀರು, ವಿಶ್ರಾಂತಿ ಜಾಗ ಇರಬೇಕು ಎಂಬ ನಿಯಮವಿದ್ದರೂ ಅದನ್ನು ಪೂರೈಸದೆ ಟೋಲ್ ಗೇಟ್ ನಲ್ಲಿ ಶುಲ್ಕ ವಸೂಲು ನಡೆಯುತ್ತಿದೆ. ಈ ಅಕ್ರಮ ಸುಲಿಗೆ ಮಾಡುತ್ತಿರುವ ಟೋಲ್ ಕೇಂದ್ರವನ್ನು ಬಂದ್ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕೆನರಾ ಬಸ್ಸು ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ಬಲ್ಲಾಲ್, ಕರಾವಳಿ ಬಸ್ಸು ಚಾಲಕ ಮಾಲಕ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಉಡುಪಿ ಜಿಲ್ಲಾ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷರು ರಮೇಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಅನ್ಸಾರ್ ಅಹಮದ್, ರಾಜ್ಯ ಟ್ರಾವೆಲ್ ಏಜೆನ್ಸಿ ಸಂಘದ ಅಧ್ಯಕ್ಷರು ರಾಧಾಕೃಷ್ಣ ವಲ್ಲ ಇವರುಗಳು ಟೋಲ್ಗೇಟ್ ವಿರುದ್ಧ ನಡೆಯುವ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಅದ್ದಿ ಬೊಳ್ಳೂರು, ಫಿರೋಜ್ ಕಂಚಿನಡ್ಕ, ಹನೀಫ್ ಹಳೆಯಂಗಡಿ ಹಾಗೂ ಇನ್ನಿತರ ಸಂಘಸಂಸ್ಥೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ವರದಿ: ಅದ್ದಿ ಬೊಳ್ಳೂರು.