ದಮ್ಮಾಮ್ (ಕೆ.ಎಸ್.ಎ): ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಸುಪರ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಬಿಹಾರದ ಶತ್ರುದಾನ್ ಎಂಬುವವರು ಸುಮಾರು ಒಂದೂವರೆ ವರ್ಷದ ಹಿಂದೆ ದಿಢೀರನೆ ಕಾಣಿಸಿಕೊಂಡ ರೋಗ ಉಲ್ಬಣಗೊಂಡು ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿದ್ದರು.
ಇವರನ್ನು ಊರಿಗೆ ಕಳಿಸುವ ವಿಷಯವಾಗಿ ಅವರ ಸಹೋದರ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ನಾಯಕರನ್ನು ಸಂಪರ್ಕಿಸಿದ್ದು, ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ವಿಂಗ್ ನಾಯಕರಾದ ಬಾಷಾ ಗಂಗಾವಳಿ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಂಗ್ ಅಧ್ಯಕ್ಷರಾದ ಮೊಹಮ್ಮದ್ ಮಲೆಬೆಟ್ಟು ಅವರ ನೇತೃತ್ವದಲ್ಲಿ ಸಂಘಟನೆಯ ಇತರ ಸ್ವಯಂಸೇವಕರೊಂದಿಗೆ ನಿಯಮಿತವಾಗಿ ರೋಗಿಯನ್ನು ಭೇಟಿ ಮಾಡಿ, ರೋಗಿಯನ್ನು ಊರಿಗೆ ಕಳಿಸಲು ಬೇಕಾದ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಟ್ಟಿದ್ದಾರೆ.
ಇಂತಹಾ ಸ್ಥಿತಿಯಲ್ಲಿರುವ ರೋಗಿಯನ್ನು ಮರಳಿ ಸ್ವದೇಶಕ್ಕೆ ಕಳುಹಿಸುವುದು ಒಂದು ಸವಾಲಾಗಿತ್ತು. ಸೌದಿ ಕಾನೂನು ಹಾಗು ಆರೋಗ್ಯ ಇಲಾಖೆಯ ನಿರಂತರ ಸಂಪರ್ಕದಿಂದ ಜನವರಿ 26 ರಂದು ರೋಗಿಯನ್ನು ಊರಿಗೆ ಕಳಿಸುವಲ್ಲಿ ಯಶಸ್ವಿಯಾಯಿತು.
ಲಕ್ನೊ ವಿಮಾನ ನಿಲ್ದಾಣದಿಂದ ಆಂಬುಲನ್ಸ್ ಮುಖಾಂತರ ಬಿಹಾರ ತಲಪಿಸಲಾಯಿತು. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಈ ಒಂದು ಉತ್ತಮ ಕಾರ್ಯಾಚರಣೆಯಲ್ಲಿ ಸಾಂತ್ವನ ವಿಭಾಗದೊಂದಿಗೆ ಬೆಂಗಾವಲಾಗಿ ನಿಂತ ದಮ್ಮಾಮ್ ಝೋನ್ ಕಾರ್ಯಕಾರಿ ಮತ್ತು ಕ್ಯಾಬಿನೆಟ್ ಸದಸ್ಯರಿಗೆ ಹಾಗು ಇನ್ನಿತರ ಸಂಘ ಸಂಸ್ಥೆ ನಾಯಕರಿಗೆ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ವಿಭಾಗವು ಅಭಿನಂದನೆಗಳನ್ನು ಸಲ್ಲಿಸಿದೆ.








