ಬೆಂಗಳೂರು: ಕನ್ನಡ ಬಾವುಟ ಸುಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ನಾಳೆ ಡಿ.31ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಅನ್ನು ವಾಟಾಳ್ ನಾಗರಾಜ್ ಹಿಂಪಡೆದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಮನವೊಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್, ನಾಳೆ ನಡೆಯಬೇಕಾಗಿದ್ದ ಬಂದ್ ಇರಲ್ಲ. ಸಿಎಂ ಭರವಸೆ ಹಿನ್ನೆಲೆ ನಾಳೆಯ ಬಂದ್ ವಾಪಾಸ್ ಪಡೆದಿರೋದಾಗಿ ತಿಳಿಸಿದರು.
ನಾಳೆ ಬಂದ್ ಇಲ್ಲ, ಬೆಂಗಳೂರಿನಲ್ಲಿ ಪ್ರತಿಭಟನೆ ಇರುತ್ತೆ. ಜನವರಿ 22ರಂದು ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಕನ್ನಡಪರ ಸಂಘಟನೆಯ ಒಕ್ಕೂಟದ ಸದಸ್ಯರು ಜ.22ರಂದು ಬಂದ್ ಮಾಡಲು ಒಮ್ಮತದ ನಿರ್ಧಾರ ಮಾಡಿದ್ದಾರೆ. ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್, ಕುಮಾರ್ ಒಕ್ಕೂಟದ ಸದಸ್ಯರು ಒಮ್ಮತದ ನಿರ್ಧಾರ ಮಾಡಿದ್ದಾರೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಜನವರಿ 22ರಂದು ಬಂದ್ ಮಾಡಲು ನಿರ್ಧರಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಸಿಎಂ ಮನವೊಲಿಕೆ ಸಕ್ಸಸ್
ಸಿಎಂ ಎರಡು ಬಾರಿ ಮನವಿ ಮಾಡಿದ್ರು, ಇಂದು ಸಿಎಂ ಗೃಹಕಚೇರಿ ಕೃಷ್ಣಾಗೆ ಕರೆಸಿ ಮಾತಾಡಿದ್ರು. ಎಂಇಎಸ್ ನಿಷೇಧಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ. ಬಂದ್ ಹಿಂದೆ ಪಡೆಯಿರಿ ಎಂದು ಸಿಎಂ ಮನವಿ ಮಾಡಿದರು. ಸಿಎಂ ಮನವಿಗೆ ಗೌರವ ಕೊಡಲು ನಿರ್ಧಾರ ಮಾಡಲಾಗಿದೆ. ಒಕ್ಕೂಟದ ಮುಖಂಡರು ಎಲ್ಲರೂ ನಾಳೆ ಬಂದ್ ಮಾಡಿದ್ರೆ ಹೊಸ ವರುಷಕ್ಕೆ ತೊಂದರೆ ಆಗುತ್ತೆ ಎಂದು ಬಂದ್ ಮುಂದೂಡಲು ಒತ್ತಡ ಹೇರಿದ್ದರು. ನನ್ನ ಜೀವನದಲ್ಲಿ ಈ ರೀತಿ ಒತ್ತಡ ಎಂದೂ ಬಂದಿದ್ದಿಲ್ಲ. ಹೀಗಾಗಿ ಬಂದ್ ವಾಪಸ್ ಪಡೆದಿರೋದಾಗಿ ವಾಟಾಳ್ ಸ್ಪಷ್ಟನೆ ನೀಡಿದರು.







