ಉಪ್ಪಿನಂಗಡಿ : ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭ ನಡೆದ ಸಾರ್ವಜನಿಕ ಶಾಂತಿಭಂಗ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕೋವಿಡ್ ನಿಯಮಾವಳಿ ಉಲ್ಲಂಘನೆ, ಕೊಲೆ ಯತ್ನ ಮತ್ತಿತರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ 3 ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಅದರಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿ 10 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಒಂದನೇ ಪ್ರಕರಣ: ಸಾರ್ವಜನಿಕ ಶಾಂತಿಭಂಗ!
ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಓಮನ ಎನ್.ಕೆ. ಅವರು ದೂರು ನೀಡಿದ್ದು, ಪಿಎಫ್ಐ ಸಂಘಟನೆಯ ಮುಖಂಡರಾದ ಝಕಾರಿಯಾ, ಮುಸ್ತಾಫ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಆರೋಪಿತರು ಅನುಮತಿ ಪಡೆಯದೆ ಅಕ್ರಮ ಕೂಟ ಸೇರಿ ಠಾಣೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಗುಂಪು ಕಟ್ಟಿ ಸಾರ್ವಜನಿಕರು, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಾ, ಸಂಜೆ ಆರೋಪಿಗಳು ಠಾಣೆಗೆ ಪ್ರವೇಶಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಳ್ಳಿ ಅವರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ, ಮಾಸ್ಕ್ ಧರಿಸದೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಲಂ 143, 147, 151, 341, 353, 269, 270, 149 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡನೇ ಪ್ರಕರಣ: ಕೊಲೆ ಯತ್ನ, ಮಾನಭಂಗ ಯತ್ನ!
ಎರಡನೇ ದೂರು ನೀಡಿರುವ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಓಮನ ಎನ್.ಕೆ. ಅವರು, 144 ಸೆಕ್ಷನ್ ಜಾರಿಯಲ್ಲಿದ್ದರೂ ಠಾಣೆಯ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿದ್ದ ಗುಂಪು ಠಾಣೆಯೊಳಗೆ ನುಗ್ಗಲು ಪ್ರಯತ್ನಿಸಿದ್ದು, ಸ್ಥಳದಲ್ಲಿಬಂದೋಬಸ್ತ್ ಕರ್ತವ್ಯದಲ್ಲಿದ್ದ ತನಗೆ ಹಲ್ಲೆ ನಡೆಸಿ, ಸಮವಸ್ತ್ರ ಹರಿದು ಹಲ್ಲೆ ನಡೆಸಿರುವುದಲ್ಲದೆ, ಮಾನಭಂಗಕ್ಕೆ ಯತ್ನಿಸಿ ಕೊಲೆ ಯತ್ನ ನಡೆಸಿದ್ದಾರೆ. ಇದೇ ಸಂದರ್ಭ ತನ್ನ ಜತೆ ಕರ್ತವ್ಯದಲ್ಲಿದ್ದ ರೇಣುಕಾ ಹಾಗೂ ಇತರ ಪೊಲೀಸರಿಗೆ, ಅವರ ಮೇಲಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಆರೋಪಿಗಳ ವಿರುದ್ಧ ಕಲಂ 143, 147, 151, 341, 354, 332, 353, 427, 307, 269, 270, 149 ಭಾದಂಸಂ ಮತ್ತು ಕಲಂ: 2(ಎ), ಕೆಪಿಡಿಎಲ್ಪಿ ಕಾಯಿಧಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರನೇ ಪ್ರಕರಣ: ಪೊಲೀಸರ ಮೇಲೆ ದಾಳಿ!
ಬಂಟ್ವಾಳ ಗ್ರಾಮಾಂತರ ಠಾಣೆ ಉಪನಿರೀಕ್ಷಕ ಪ್ರಸನ್ನ ಕುಮಾರ್ ಎಂಬವರು ದೂರು ನೀಡಿದ್ದು, ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದ ಗುಂಪು ಪೊಲೀಸರ ಮೇಲೆ ಹಲ್ಲೆನಡೆಸಿ, ಠಾಣೆಯೊಳಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸನ್ನಿವೇಶ ಅರಿತು ಅವರನ್ನು ಚದುರಿಸಲು ತಾನು ಸೇರಿದಂತೆ ಬಂದೋಬಸ್ತ್ನಲ್ಲಿ ನಿರತರಾಗಿದ್ದ ಇತರರು ತೆರಳಿದಾಗ ಮೊದಲೇ ಪಿತೂರಿ ನಡೆಸಿ ತಂದಿರಿಸಿದ್ದ ಸೋಡಾ ಬಾಟ್ಲಿಗಳನ್ನು ಆಂಬ್ಯುಲೆನ್ಸ್ ವಾಹನದಿಂದ ತೆಗೆದು ಪೊಲೀಸರ ಮೇಲೆಯೇ ಗುಂಪಲ್ಲಿದ್ದವರು ದಾಳಿ ನಡೆಸಿದ್ದರು.
ಈ ಸಂದರ್ಭ ವ್ಯಕ್ತಿಯೊಬ್ಬ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಹೊಟ್ಟೆಗೆ ತಿವಿಯಲು ಬಂದಿದ್ದು, ಅದನ್ನು ತಾನು ತಡೆದಿದ್ದರಿಂದ ಅಂಗೈಗೆ ಗಾಯವಾಗಿದೆ. ಅಲ್ಲದೇ, ಡಿವೈಎಸ್ಪಿಯವರ ಮೇಲೆಯೂ ಕಲ್ಲುತೂರಾಟ ನಡೆಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಗುಂಪು ಸೇರಿದ್ದ ಜನರು ಸ್ಥಳದಿಂದ ಒಮ್ಮೆಲೆ ಒಬ್ಬರ ಮೇಲೊಬ್ಬರಂತೆ ಬಿದ್ದು ಓಡುತ್ತಾ ಮಸೀದಿಯ ಕಾಂಪೌಂಡ್ ಗೋಡೆ ಹಾರಿ ಮಸೀದಿಯೊಳಗೆ ಹೋಗಿರುವುದಲ್ಲದೆ, ಪೊಲೀಸರ ಮೇಲೆ ಕಲ್ಲು, ಸೋಡಾ ಬಾಟ್ಲಿಗಳನ್ನು ತೂರಿದ್ದಾರೆ. ಅಲ್ಲದೇ, ಪೊಲೀಸ್ ವಾಹನಕ್ಕೆ, ಇಲಾಖಾ ಸೊತ್ತಿಗೆ ಹಾನಿಗೊಳಿಸಿ, ಸುಮಾರು 25 ಸಾವಿರ ರೂ. ನಷ್ಟವುಂಟುಮಾಡಿದ್ದಾರೆ ಎಂದು ದೂರಿದ್ದಾರೆ.ಈ ಬಗ್ಗೆ ಪೊಲೀಸರು ಕಲಂ 143, 147, 148, 332, 504, 427, 353, 307, 149 ಭಾದಂಸಂ ಮತ್ತು ಕಲಂ 2(ಎ) ಕೆಪಿಡಿಎಲ್ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧನ!
ಕೊಲೆ ಯತ್ನ ಹಾಗೂ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಆರೋಪಿಗಳಾದ ಮಹಮ್ಮದ್ ತಾಹಿರ್, ಸ್ವಾದಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಫೈಝಲ್, ಮಹಮ್ಮದ್ ಹನೀಫ್, ಎನ್. ಖಾಸಿಂ, ಮಹಮ್ಮದ್ ಆಸಿಫ್, ತುಫೈಲ್ ಮಹಮ್ಮದ್ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.







