ಕಲಬುರಗಿ: ಕಲಬುರಗಿಯ ನಲ್ಲಿಗಳಲ್ಲಿ ನೀರು ಹರಿಯುತ್ತದೋ ಇಲ್ಲವೋ ಆದರೆ ಬ್ರಹ್ಮಾಂಡ ಭ್ರಷ್ಟಾಚಾರದ ಹಣ ಮಾತ್ರ ನೀರಿಗಿಂತ ರಭಸವಾಗಿ ಹರಿದಾಡುತ್ತಿದೆ. ಜನರ ತೆರಿಗೆ ಹಣ ಅದ್ಹೇಗೆ ಭ್ರಷ್ಟರ ಪಾಲಾಗುತ್ತಿದೆ ಎನ್ನುವುದಕ್ಕೆ ಜೇವರ್ಗಿ ಪಿಬ್ಲ್ಯೂಡಿ ಉಪ ವಿಭಾಗದ ಕಿರಿಯ ಇಂಜಿಯರ್ ಮನೆಯ ಪೈಪ್ನಲ್ಲಿ ಹರಿದು ಬಂದ ಹಣವೇ ಸಾಕ್ಷಿ. ವೀಡಿಯೋ ನೋಡಿ
ಅಷ್ಟಕ್ಕೂ ಡ್ರೈನೇಜ್ ಪೈಪ್ನಲ್ಲಿ ಹಣ ಇರೋದು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದೇ ರೋಚಕ. ಹೌದು, ಬುಧವಾರ ಭ್ರಷ್ಟ ಅಧಿಕಾರಿ ಶಾಂತಗೌಡ ಬಿರಾದರ್ಗೆ ಊಹಿಸಿಕೊಳ್ಳದಂತ ದಿನ. ಪ್ರತಿದಿನದಂತೆ ಮಂಗಳವಾರ ರಾತ್ರಿ ಊಟ ಮಾಡಿ, ರಾತ್ರಿ ಸುಖ ನಿದ್ದೆ ಕಳೆದು ಬೆಳಗ್ಗೆ ಕಣ್ಣು ಬಿಡುವಷ್ಟರಲ್ಲಿ ಎದುರಿಗೆ ಬಂದಿದ್ದು ಎಸಿಬಿ ಅಧಿಕಾರಿಗಳು.
ಎಸಿಬಿ ದಾಳಿ ಆಗಬಹುದು ಎಂಬ ಚಿಕ್ಕ ಪರಿಕಲ್ಪನೆ ಕೂಡಾ ಇಲ್ಲದ ಶಾಂತಗೌಡ, ಬಾಗಿಲು ಮುಂದೆ ಅಧಿಕಾರಿಗಳು ಬಂದಿರುವದು ಕಂಡು ದಂಗಾಗಿದ್ದ. ಮನೆಯಲ್ಲಿ ಬೇಕಾಬಿಟ್ಟಿ ಬಿಸಾಡಿದ್ದ ಹಣ ಚಿನ್ನಾಭರಣ ಎಲ್ಲಿ ಬಚ್ಚಿಡಬೇಕು ಎನ್ನುವುದು ತಿಳಿಯದೇ ಹೈರಾಣಾಗಿದ್ದ. ವಾಲ್ ಸೀಲಿಂಗ್, ಡ್ರೈನೇಜ್ ಪೈಪ್ ಒಳಗೆ ಹಣ ಸುರಿದು ಎಸಿಬಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಆದರೆ, ಭ್ರಷ್ಟ ಶಾಂತಗೌಡ ಚಾಪೆ ಕೆಳಗೆ ನುಸುಳಿದರೆ ಎಸಿಬಿ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿ ತಾವೇನು ಎನ್ನುವುದನ್ನು ತೋರಿಸಿದ್ದಾರೆ. ಅಂದಂತೆ ಹಣ ಸಿಕ್ಕಿರುವ ಪೈಪ್ ವಾಷಿಂಗ್ ಮಷಿನ್ನಿಂದ ನೀರು ಹೊರಹೋಗಲು ಸಂಪರ್ಕ ನೀಡಿದ್ದ ಪೈಪ್ ಆಗಿತ್ತು. ಕಳೆದ ಎರಡು ತಿಂಗಳಿಂದ ವಾಷಿಂಗ್ ಮಷಿನ್ ಬಳಸಿರಲಿಲ್ಲ. ಎಸಿಬಿ ಅಧಿಕಾರಿಗಳು ಬಂದಾಕ್ಷಣ ಪೈಪ್ನಲ್ಲಿ ಹಣದ ಕಂತೆ ಹಾಕಿದ್ದ ಶಾಂತಗೌಡ, ನಂತರ ತಾನೇ ಎಡವಟ್ಟು ಮಾಡಿ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ.
ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಯ ಮನೆಯ ಟಾಯ್ಲೆಟ್ ಪೈಪ್ ನಲ್ಲಿ ಕಂತೆ ಕಂತೆ ನೋಟುಗಳು
ಮನೆಯಲ್ಲಿ ಟಾಯ್ಲೆಟ್ ಬಳಿ ಇಟ್ಟಿದ್ದ ವಾಷಿಂಗ್ ಮಷಿನ್ ಪೈಪ್ನಲ್ಲಿ ಕಂತೆ ಕಂತೆ ಹಣ ಹಾಕಿ ಪ್ಲೇಟ್ ಬದಲಾಗಿ ಮೇಲೆ ಕಲ್ಲು ಇಟ್ಟಿದ್ದಾನೆ. ಪದೇ ಪದೇ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಪೈಪ್ ಬಳಿ ಹೋಗ್ತಿದ್ದ ಶಾಂತಗೌಡ ಮತ್ತು ಆತನ ಪುತ್ರ, ಪೈಪ್ ಬಳಿಯೇ ಹೆಚ್ಚು ಓಡಾಟ ನಡೆಸಿದ್ದರು.
ತಂದೆ-ಮಗನ ನಡೆಯಿಂದ ಅನುಮಾನಗೊಂಡ ಎಸಿಬಿ ಸಿಬ್ಬಂದಿ ಪೈಪ್ ಮೇಲಿನ ಕಲ್ಲು ತಳ್ಳಿದ್ದಾರೆ. ಆಗ ಪೈಪ್ನಲ್ಲಿ ಹಣ ಇರೋದು ಪತ್ತೆಯಾಗಿದೆ. ಇದರಿಂದ ನಂತರ ಮನೆ ಹೊರಗಡೆಯಿಂದ ಪೈಪ್ ಕತ್ತರಿಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ. ಪೈಪ್ ನಲ್ಲಿ 13 ಲಕ್ಷ ರೂ., ವಾಲ್ ಸೀಲಿಂಗ್ನಲ್ಲಿ ಬಚ್ಚಿಟ್ಟ 6 ಲಕ್ಷ ರೂ. ಸೇರಿ 54 ಲಕ್ಷ ರೂ. ನಗದು ಸಿಕ್ಕಿದೆ. ಅಲ್ಲದೆ ಅಪಾರ ಪ್ರಮಾಣದ ಚರಾಸ್ಥಿ ಕೂಡ ಪತ್ತೆಯಾಗಿದೆ.
ಆದಾಯಕ್ಕಿಂತ ಅಧಿಕ ಸಂಪಾಧನೆ ಮಾಡಿದ ಶಾಂತಗೌಡಗೆ ಸದ್ಯ ಎಸಿಬಿ ಅಧಿಕಾರಿಗಳು ಜೈಲು ದಾರಿ ತೋರಿಸಿದ್ದಾರೆ. ಗುರುವಾರ ಮತ್ತೆ ಬೇಟೆಗೆ ಇಳಿದ ಎಸಿಬಿ ತಂಡ ಶಾಂತಗೌಡ ಹಾಗೂ ಆತನ ಕುಟುಂಬ ಸದಸ್ಸರ ಬ್ಯಾಂಕ್ ಖಾತೆ, ಬ್ಯಾಂಕ್ ಲಾಕರ್ಗಳ ಶೋಧ ಶುರು ಮಾಡಿದ್ದಾರೆ. ಈಗಾಗಲೇ ಹತ್ತಾರು ಬ್ಯಾಂಕ್ಗಳಲ್ಲಿ ಖಾತೆ ಇರುವದು ಕೂಡಾ ಪತ್ತೆಯಾಗಿದೆ.








ಇಂತಹ ಭ್ರಷ್ಟ ಅಧಿಕಾರಿಗಳನ್ನು ಇನ್ನಷ್ಟು ಬೇಟೆಯಾಡುವುದು ನಮ್ಮ ಕರ್ನಾಟಕಕ್ಕೆ ಒಳಿತು. ಯಾಕೆಂದರೆ ತಿನ್ನಲು ಅನ್ನ ಇಲ್ಲದೆ ಆತ್ಮಹತ್ಯೆ ಪ್ರಕರಣಗಳು, ಅದೇ ರೀತಿ ರೈತರ ಕೃಷಿ ನಾಶವಾಗಿ ಬ್ಯಾಂಕ್ ಸಾಲ ಸಂದಾಯ ಮಾಡಲಾಗದೆ ಆತ್ಮಹತ್ಯೆ ಪ್ರಕರಣಗಳು,ಅದೆಷ್ಟು ನಿರುದ್ಯೋಗಿಗಳು ಮನೆಯಲ್ಲೇ ಉಳಿದು ಸಂಕಷ್ಟಕ್ಕೀಡಾಗಿದ್ದು,ಅಲ್ಲದೆ ನಮ್ಮ ತೆರಿಗೆ ಹಣದಿಂದ ಭ್ರಷ್ಟತೆಯ ಮಂಪರಿನಲ್ಲಿ ಮುಳುಗಿಹೋಗಿದ್ದ ಇನ್ನಷ್ಟು ದುಷ್ಟ ಅಧಿಕಾರಿಗಳನ್ನು ಪತ್ತೆಹಚ್ಚಿ ನಮ್ಮ ದೇಶ ಉದ್ದಾರ ಆಗುವತ್ತ ಚಿಂತಿಸಬೇಕಾಗಿದೆ.
ಮನೆ ತೆರಿಗೆ, ನೀರಿನ ಬಿಲ್ಲು, ಕರೆಂಟ್ ಬಿಲ್ಲು,ದಿನನಿತ್ಯ ಉಪಯೋಗಿಸುವ ಅನ್ನ ಸಾಂಬಾರು ಪದಾರ್ಥಗಳ ತೆರಿಗೆ, ಜನಸಾಮಾನ್ಯರ ಮೈಮೇಲೆ ಬಿದ್ದು ಎದ್ದೇಳ ಲಾರದೆ ನರಳುತ್ತಿದ್ದಾರೆ. ಮನೆ ತೆರಿಗೆ ಕರೆಂಟ್ ಬಿಲ್ಲು ನೀರಿನ ಬಿಲ್ಲು ದಿನನಿತ್ಯ ಉಪಯೋಗಿಸುವ ಅಡುಗೆ ಸಾಮಾನುಗಳು ದರ ಪೆಟ್ರೋಲ್ ಡೀಸೆಲ್ ದರ ಗ್ಯಾಸ್ ಸಿಲಿಂಡರ್ ದರ ಕಡಿಮೆ ಮಾಡಬಹುದು. ಇಂತಹ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸುವ ಮೂಲಕ.